ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವು ಪ್ರಕರಣ: ‘ಐಟಿ ಕಿರುಕುಳ’ ತನಿಖೆಗೆ ಐವನ್ ಡಿಸೋಜ ಆಗ್ರಹ

ಐವನ್ ಡಿಸೋಜ
ಮಂಗಳೂರು, ಜು.3: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ ಸಾವಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಗಳ ಕಿರುಕುಳವೇ ಕಾರಣ. ಈ ಕುರಿತು ಕೇಂದ್ರ ಸರಕಾರ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಮಂಗಳೂರು ನಗರದ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಟಿ ಮತ್ತು ಇಡಿ ಕಿರುಕುಳವೇ ಉದ್ಯಮಿಯ ಸಾವಿಗೆ ಕಾರಣ ಎಂಬುದು ಸಿದ್ಧಾರ್ಥ ಅವರ ಪತ್ರದಲ್ಲಿ ಸ್ಪಷ್ಟವಾಗಿ ಇದೆ. ಕಿರುಕುಳ ನೀಡಿ, ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಮತ್ತು ಮಾನವ ಹತ್ಯೆ ಆರೋಪದಡಿ ಪ್ರಕರಣ ದಾಖಲಿಸಲು ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಉದ್ಯಮ ಸ್ನೇಹಿ ತೆರಿಗೆ ವ್ಯವಸ್ಥೆ ಇರಬೇಕು. ಆದರೆ, ಐಟಿ ಅಧಿಕಾರಿಗಳು ತನಿಖೆಯ ನೆಪದಲ್ಲಿ ಸಿದ್ಧಾರ್ಥ ಅವರ ಕಂಪೆನಿಯ ಆಸ್ತಿ, ಶೇರುಗಳನ್ನು ಜಪ್ತಿ ಮಾಡಿ ಉದ್ಯಮ ನಡೆಸದಂತೆ ಹಿಂಸಿಸಿದ್ದಾರೆ. 50,000 ಜನರಿಗೆ ಉದ್ಯೋಗ ನೀಡಿದ್ದ ಉದ್ಯಮಿ ಕಿರುಕುಳ ತಾಳಲಾರದೇ, ಸಾವಿಗೆ ಶರಣಾಗಿದ್ದಾರೆ. ಇಂತಹ ಪ್ರಕರಣ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಿದ್ಧಾರ್ಥ ಪ್ರಕರಣದಲ್ಲಿ ದೇಶದ ತೆರಿಗೆ ನೀತಿಗೆ ವಿರುದ್ಧವಾಗಿ ಐಟಿ ಅಧಿಕಾರಿಗಳು ನಡೆದುಕೊಂಡಿದ್ದಾರೆ. ಇಂತಹ ನಡೆಯನ್ನು ಒಪ್ಪಲಾಗದು. ಈ ರೀತಿ ವ್ಯವಸ್ಥಿತವಾಗಿ ಉದ್ಯಮಿಗಳನ್ನು ನಾಶ ಮಾಡುವ ಸಂಚಿನ ವಿರುದ್ಧ ದೇಶದಲ್ಲಿ ಪ್ರಬಲವಾದ ಹೋರಾಟ ನಡೆಯುವ ಅಗತ್ಯವಿದೆ ಎಂದು ಹೇಳಿದರು.
ಅದಾನಿ, ಅಂಬಾನಿಯಂತಹ ಕೆಲವೇ ಉದ್ಯಮಿಗಳ ಕೈಗೆ ದೇಶದ ಎಲ್ಲ ಉದ್ಯಮಗಳನ್ನು ಒಪ್ಪಿಸುವ ಪ್ರಯತ್ನ ನಡೆದಿದೆ. ಅದರ ಭಾಗವಾಗಿಯೇ ಸಿದ್ಧಾರ್ಥ ಅವರಂತಹ ಉದ್ಯಮಿಯ ಸಾವು ಸಂಭವಿಸಿದೆ. 25ಕ್ಕೂ ಹೆಚ್ಚು ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗುವಂತೆ ಆಗಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಕೆಟ್ಟ ನಿರ್ಧಾರಗಳಿಂದ ದೇಶ ಆರ್ಥಿಕ ಕುಸಿತದತ್ತ ಸಾಗಿದೆ. ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನದಲ್ಲಿನ ಲೋಪದಿಂದ ಎಲ್ಲ ಉದ್ಯಮಗಳೂ ಹಿನ್ನಡೆ ಅನುಭವಿಸುತ್ತಿವೆ. ಅದನ್ನು ಮುಚ್ಚಿಡಲು ತೆರಿಗೆ ಇಲಾಖೆಯ ಮೂಲಕ ಉದ್ಯಮಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿದರು.







