ಬಿಜೆಪಿ ತನ್ನ ಸಿದ್ಧಾಂತ ಮತ್ತು ಚಿಂತನೆಗಳಿಂದ ಈ ಮಟ್ಟಕ್ಕೆ ತಲುಪಿದೆ: ಪ್ರಧಾನಿ ಮೋದಿ

ಹೊಸದಿಲ್ಲಿ, ಆ.3: ಬಿಜೆಪಿಯು ತನ್ನ ಸಿದ್ಧಾಂತ ಮತ್ತು ಚಿಂತನೆಗಳಿಂದ ಈ ಮಟ್ಟವನ್ನು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿ ಹೇಳಿದರು. ಸಚಿವರು ಅಥವಾ ಸಂಸದರಾದರೂ ತಳಮಟ್ಟದ ಕಾರ್ಯಕರ್ತರಾಗಿ ಕ್ರಿಯಾಶೀಲರಾಗಿರುವಂತೆ ಅವರು ಇದೇ ವೇಳೆ ಪಕ್ಷದ ಸಂಸದರಿಗೆ ಸೂಚಿಸಿದರು.
ಸಂಸತ್ತಿನಲ್ಲಿ ಬಿಜೆಪಿ ಸಂಸದರಿಗಾಗಿ ಏರ್ಪಡಿಸಲಾಗಿರುವ ಎರಡು ದಿನಗಳ ತರಬೇತಿ ಕಾರ್ಯಕ್ರಮ ‘ಅಭ್ಯಾಸ ವರ್ಗ’ದಲ್ಲಿ ಮಾತನಾಡುತ್ತಿದ್ದ ಅವರು, “ಬಿಜೆಪಿಯು ಸಂಘಟನಾತ್ಮಕವಾಗಿ ಬೆಳೆದು ನಿಂತಿರುವ ಪಕ್ಷವಾಗಿದೆ. ಅದು ಜೋಡಿಸಲ್ಪಟ್ಟದ್ದಲ್ಲ. ಅದು ತನ್ನ ಸಿದ್ಧಾಂತ ಮತ್ತು ಚಿಂತನೆಗಳಿಂದ ಇಲ್ಲಿಗೆ ತಲುಪಿದೆಯೇ ಹೊರತು ಒಂದು ಕುಟುಂಬದ ಪರಂಪರೆಯಿಂದಲ್ಲ. ನೀವು ಸಚಿವ ಅಥವಾ ಸಂಸದರಾದರೂ ನಿಮ್ಮೊಳಗಿನ ಕಾರ್ಯಕರ್ತ ಸದಾ ಜೀವಂತವಾಗಿರಬೇಕು. ನಿಮ್ಮ ವಯಸ್ಸು ಏನೇ ಆಗಿರಲಿ,ಕಲಿಯುವಿಕೆ ಮುಂದುವರಿಯು ವಂತಾಗಲು ಸದಾ ವಿದ್ಯಾರ್ಥಿಗಳಾಗಿಯೇ ಇರಿ” ಎಂದು ಹೇಳಿದರು.
ಶನಿವಾರ ಆರಂಭಗೊಂಡಿರುವ ಅಭ್ಯಾಸ ವರ್ಗದಲ್ಲಿ ಪಕ್ಷದ ಸಿದ್ಧಾಂತ ಮತ್ತು ಸಂಸದೀಯ ಪರಿಪಾಠಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ.
ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರೂ ತರಬೇತಿ ಕಾರ್ಯಕ್ರಮದಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ತಿಳಿಸಿದರು.