ಅತಿಯಾದ ಕ್ರಮಗಳೇ ಆರ್ಥಿಕ ಹಿಂಜರಿತಕ್ಕೆ ಕಾರಣ: ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್

ಹೊಸದಿಲ್ಲಿ, ಆ.3: ಕೇಂದ್ರ ಸರಕಾರವು ಕೈಗೊಂಡಿರುವ ಹಲವಾರು ಸುಧಾರಣಾ ಕ್ರಮಗಳು ಪ್ರಸಕ್ತ ಆರ್ಥಿಕತೆಯ ಹಿಂಜರಿತಕ್ಕೆ ಕಾರಣವಾಗಿದೆಯೆಂದು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಶುಕ್ರವಾರ ತಿಳಿಸಿದ್ದಾರೆ. ಈ ಮೊದಲು ಕೈಗೊಂಡಿದ್ದಂತೆ ಕೇಂದ್ರ ಸರಕಾರವು ಆರ್ಥಿಕತೆಯಲ್ಲಿ ಪ್ರಮುಖ ಸಂರಚನಾತ್ಮಕ ಸುಧಾರಣೆಗಳಿಗೆ ಒತ್ತು ನೀಡಬೇಕೆಂದು ಅಮಿತಾಭ್ ಕಾಂತ್ ಸಲಹೆ ನೀಡಿದ್ದಾರೆ.
‘‘ಕೇಂದ್ರ ಸರಕಾರವು ಅತಿಯಾದ ಆರ್ಥಿಕ ಸುಧಾರಣೆಗಳನ್ನು ಅಳವಡಿಸಿಕೊಂಡಿದ್ದೇ ಆರ್ಥಿಕತೆಯ ಹಿಂಜರಿತಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಜಿಎಸ್ಟಿ (ಸರಕು ಹಾಗೂ ಸೇವಾ ತೆರಿಗೆ), ಐಬಿಸಿ (ದಿವಾಳಿತನ ಸಂಹಿತೆ), ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) ಕಾಯ್ದೆ ಹೀಗೆ, ನಾವು ಹಲವಾರು ಅರ್ಥಿಕ ಸುಧಾರಣಾ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ’’ ಎಂದು ನೀತಿ ಆಯೋಗದ ವರಿಷ್ಠರಾದ ಅಮಿತಾಬ್ ಕಾಂತ್ ತಿಳಿಸಿದರು. ತೈಲ ಹಾಗೂ ನೈಸರ್ಗಿಕ ಅನಿಲ, ಕಲ್ಲಿದ್ದಲು ವಲಯಗಳಲ್ಲಿ ಮುಂದಿನ ಹಂತದ ಸುಧಾರಣೆ ನಡೆಯಲಿದೆ’’ ಎಂದರು.
ಗ್ಯಾಸ್ ಗ್ರಿಡ್ಗಳು, ಪೈಪ್ ಲೈನ್ಗಳು, ವಿದ್ಯುತ್ ಟ್ರಾನ್ಸ್ಮಿಶನ್ ತಂತಿಮಾರ್ಗಗಳನ್ನು ಖಾಸಗಿ ವಲಯಕ್ಕೆ ವಹಿಸಬೇಕಾಗಿದೆ. ದೇಶದಲ್ಲಿರುವ ಸಾರ್ವಜನಿಕರಂಗದ ಹಲವಾರು ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಅಗತ್ಯವಿದೆಯೆಂದು ನೀತಿ ಆಯೋಗವು ಶಿಫಾರಸು ಮಾಡಿದೆಯೆಂದು ಅವರು ಹೇಳಿದರು. ಸಾರ್ವಜನಿಕರಂಗದ ಉದ್ಯಮಗಳನ್ನು ಖಾಸಗೀಕರಣಗೊಳಿಸಿದಲ್ಲಿ ಬ್ಯಾಂಕ್ ಸಾಲವು ತನ್ನಿಂತಾನೆ ಹರಿದುಬರಲಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ದೇಶವು ಕಲ್ಲಿದ್ದಲು, ಗಣಿಗಾರಿಕೆ ಹಾಗೂ ರೈಲ್ವೆಯನ್ನು ವಾಣಿಜ್ಯೀಕರಣಗೊಳಿಸಬೇಕೆಂದು ಅಮಿತಾಭ್ಕಾಂತ್ ಪ್ರತಿಪಾದಿಸಿದರು.