ಮಹಾಭಾರತಕ್ಕೂ ಮೊದಲು ಸಂಧಾನಯತ್ನ ವಿಫಲವಾಗಿತ್ತು ಎಂದ ಆದಿತ್ಯನಾಥ್
ಅಯೋಧ್ಯೆ ಸಂಧಾನ ಸಮಿತಿ ವಿಸರ್ಜನೆ ಬಗ್ಗೆ ಪ್ರತಿಕ್ರಿಯೆ

ಹೊಸದಿಲ್ಲಿ, ಆ.3: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸಂಧಾನಕ್ಕಾಗಿ ಸುಪ್ರೀಂಕೋರ್ಟ್ ನೇಮಿಸಿರುವ ತ್ರಿಸದಸ್ಯ ಸಮಿತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆಂಬುದು ತನಗೆ ಮೊದಲೇ ತಿಳಿದಿತ್ತೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಶನಿವಾರ ತಿಳಿಸಿದ್ದಾರೆ.
‘ಮಹಾಭಾರತ’ ಪುರಾಣದಲ್ಲೂ ಪಾಂಡವರು ಮತ್ತು ಕೌರವರ ನಡುವೆ ಯುದ್ಧವನ್ನು ತಪ್ಪಿಸಲು ಸಂಧಾನಗಳು ನಡೆದಿದ್ದವು. ಆದರೆ ಅವೆಲ್ಲವೂ ವಿಫಲವಾಗಿದ್ದವು ಎಂದು ಅವರು ಹೇಳಿದ್ದಾರೆ.
ದಶಕಗಳಷ್ಟು ಹಳೆಯದಾದ ಅಯೋಧ್ಯೆ ವಿವಾದವನ್ನು ಬಗೆಹರಿಸಲು ತಾನು ರಚಿಸಿದ್ದ ತ್ರಿದಸ್ಯ ಸಂಧಾನ ಸಮಿತಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಪಡಿಸಿತ್ತು ಹಾಗೂ ಆಗಸ್ಟ್ 6ರಿಂದ ದಿನಂಪ್ರತಿ ವಿಚಾರಣೆ ನಡೆಸುವುದಾಗಿ ತಿಳಿಸಿದ ಮರುದಿನವೇ ಆದಿತ್ಯನಾಥ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಗೌರವಾನ್ವಿತ ನ್ಯಾಯಾಲಯವು ಅಯೋಧ್ಯೆ ಭೂವಿವಾದದ ಸಂಧಾನಕ್ಕಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಆದರೆ ಸಂಧಾನವು ನಮ್ಮನ್ನು ಎಲ್ಲಿಗೂ ಮುನ್ನಡೆಸಲಾರದು ಎಂಬುದು ನಮಗೆ ಚೆನ್ನಾಗಿ ತಿಳಿದಿತ್ತು. ಆದರೆ ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿರುವುದು ಉತ್ತಮವಾದುದಾಗಿದೆ. ಮಹಾಭಾರತದಲ್ಲೂ ಮೊದಲಿಗೆ ಸಂಧಾನಪ್ರಯತ್ನಗಳು ನಡೆದಿದ್ದವು. ಆದರೆ ಅವು ವಿಫಲಗೊಂಡಿವೆ’’ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶ ಎಫ್.ಎಂ.ಖಲೀಪುಲ್ಲಾ, ಧಾರ್ಮಿಕ ಗುರು ಶ್ರೀ ರವಿಶಂಕರ್ ಹಾಗೂ ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚೂ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಈ ವರ್ಷದ ಮಾರ್ಚ್ನಿಂದ ಸಮಾಲೋಚನೆಗಳನ್ನು ಆರಂಭಿಸಿತ್ತು.
ಸಮಿತಿಯ ಸಂಧಾನಯತ್ನಗಳು ಯಾವುದೇ ಫಲ ನೀಡದ ಕಾರಣ ಅದನ್ನು ವಿಸರ್ಜಿಸಿರುವುದಾಗಿ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನೊಳಗೊಂಡ ನ್ಯಾಯಪೀಠವು ಶುಕ್ರವಾರ ತಿಳಿಸಿತ್ತು.