ಆರೆಸ್ಸೆಸ್ನ ಸಂಸ್ಕಾರ ಪಾಠ ವ್ಯವಸ್ಥೆಗೆ ವಿರೋಧ
ಬೆಂಗಳೂರು, ಆ.3: ನವ ದಂಪತಿಗಳಿಗೆ ಸಂಸ್ಕಾರ ಎಂಬುದು ಜನ್ಮಜಾತವಾಗಿ ಬರಬೇಕು ಎಂಬ ಕಲ್ಪನೆಯಲ್ಲಿ ಆರೆಸ್ಸೆಸ್ ಪಾಠ ಮಾಡುವ ವ್ಯವಸ್ಥೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಆರೆಸ್ಸೆಸ್ ಮನುಸ್ಮೃತಿ ಪೂರಿತವಾದ ಸಂಸ್ಕಾರವನ್ನು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಮನುಸ್ಮೃತಿಯು ಸ್ತ್ರೀಯನ್ನು ಸ್ವಾತಂತ್ರಕ್ಕೆ ಅರ್ಹಳಲ್ಲ ಎನ್ನುತ್ತದೆ. ಅದು ಸನಾತನ ಸಂಸ್ಕೃತಿ ಹೇರುವ ಹುನ್ನಾರದ ಭಾಗವಾಗಿದೆ. ಆರೆಸ್ಸೆಸ್ ಮಹಿಳಾ ವಿರೋಧಿ ಸಂಸ್ಕಾರ ನಡೆಸುತ್ತಿದೆ ಎಂದು ಲೇಖಕಿ ಹಾಗೂ ಚಿಂತಕಿ ಕೆ.ನೀಲಾ ಮತ್ತು ಹೋರಾಟಗಾರ್ತಿ ಕೆ.ಎಸ್.ವಿಮಲಾ ಹೇಳಿದ್ದಾರೆ.
ಭಾರತ ವಿಭಿನ್ನ ಧಾರೆಯ ನಾನಾ ಸಂಸ್ಕಾರಗಳನ್ನು ಹೊಂದಿದೆ. ಸಂಸ್ಕಾರ ಸಂಸ್ಕೃತಿಯ ಹೆಸರಿನಲ್ಲಿ ಇಂತಹ ಚಟುವಟಿಕೆ ನಡೆಸುತ್ತಿರುವುದು ಭಾರತವನ್ನು ಮತೀಯಗೊಳಿಸುವ ಹುನ್ನಾರ. ಪಾಳೆಗಾರಿಕೆ, ವರ್ಣಾಶ್ರಮ ಧರ್ಮವೇ ಅದರ ನಂಬಿಕೆಯ ತಳಹದಿ. ಪುತ್ರ ಶ್ರೇಷ್ಠತೆಯನ್ನು ತುಂಬುತ್ತ ದಂಪತಿಗೆ ಹೆಣ್ಣು ಭ್ರೂಣ ಹತ್ಯೆಗೆ ಪ್ರಚೋದಿಸಿರಲೂ ಸಾಕು. ಸನಾತನವಾದಿಗಳಿಗೆ ಈ ಅಧಿಕಾರವನ್ನು ಕೊಟ್ಟವರಾರು? ಎಂದು ನೀಲಾ ಹಾಗೂ ವಿಮಲಾ ಪ್ರಶ್ನಿಸಿದ್ದಾರೆ.
ತಪಾಸಣೆ ನಡೆಯಲಿ: ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಸುಪ್ರಜಾ ಕೇಂದ್ರವನ್ನು ಭ್ರೂಣ ಪರೀಕ್ಷೆ ತಡೆ ಕಾಯ್ದೆ (ಪಿಸಿಪಿಎನ್ಡಿಟಿ) ಕಾನೂನಿನ ಅನ್ವಯ ತಪಾಸಣೆಗೆ ಒಳಪಡಿಸಬೇಕು. ಕುಸಿಯುತ್ತಿರುವ ಲಿಂಗಾನುಪಾತದ ಹಿಂದೆ ಇಂತಹ ಶಕ್ತಿಗಳ ಕೈವಾಡ ಇರುವ ಸಾಧ್ಯತೆ ಇರುತ್ತದೆ. ಸರಕಾರವು ಇಂತಹ ಕೇಂದ್ರಗಳನ್ನು ನಿಯಂತ್ರಣ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.