ಉಡುಪಿ: ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ

ಉಡುಪಿ, ಆ.3: ನಗರಸಭೆಯ ಶೇ.5ರ ನಿಧಿಯಡಿಯಲ್ಲಿ ನಗರಸಭಾ ವ್ಯಾಪ್ತಿಯ ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನವನ್ನು ಶಾಸಕ ಕೆ.ರಘುಪತಿ ಭಟ್ ಅವರು ಶನಿವಾರ ಅಪರಾಹ್ನ ಉಡುಪಿ ನಗರಸಭೆಯಲ್ಲಿ ವಿತರಿಸಿದರು.
ಪ್ರತಿ ವಾಹನಕ್ಕೆ 60,990 ರೂ.ನಂತೆ ಒಟ್ಟು 7 ಜನರಿಗೆ 4,26,930ರೂ. ಮೊತ್ತದ ತ್ರಿಚಕ್ರ ವಾಹನಗಳನ್ನು ವಿತರಿಸಿಸಲಾಯಿತು. ಬುಡ್ನಾರಿನ ಎನ್. ಸುಕೇಶ್, ಕಲ್ಮಾಡಿಯ ಜಯ ಪೂಜಾರಿ, ಮೂಡುಬೆಟ್ಟಿನ ನಿಖಿಲ್ ಶೆಟ್ಟಿ, ಪೆರಂಪಳ್ಳಿಯ ಅನಿಲ್ ಆರೋಜ, ಕೊಡವೂರಿನ ಕಾಳು ಶೆಟ್ಟಿಗಾರ್, ಪೆರಂಪಳ್ಳಿ ಯ ಗ್ಲಾಡ್ಸನ್ ಡಿ ಸೋಜ ಹಾಗೂ ಗಣೇಶ್ ಮೂಡುಪೆರಂಪಳ್ಳಿ ಇಂದು ತ್ರಿಚಕ್ರ ವಾಹನವನ್ನು ಪಡೆದರು.
ಬಳಿಕ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಿವೇಶನ ರಹಿತರಿಗೆ ವಸತಿ ಸಮುಚ್ಚಯವನ್ನು ನಿರ್ಮಿಸಿ ಕೊಡುವ ಬಗ್ಗೆ ಕೊಳಚೆ ಅಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು. ಈ ಬಗ್ಗೆ ಡಿಪಿಆರ್ ತಯಾರಿಸಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಪೌರಾಯುಕ್ತರಾದ ಆನಂದ್ ಕಲ್ಲೋಳಿಕರ, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗಣೇಶ್, ಕೊಳಚೆ ಅಭಿವೃದ್ಧಿ ಮಂಡಳಿಯ ಶ್ರೀಪಾದ ಮತ್ತು ಕರ್ನಾಟಕ ಗೃಹ ಮಂಡಳಿಯ ಕಿರಿಯ ಇಂಜಿನಿಯರ್ ಹರೀಶ್, ನಗರಸಭೆಯ ಕಿರಿಯ ಇಂಜಿನಿಯರ್ ದುರ್ಗಾಪ್ರಸಾದ್, ಯೋಗೀಶ್ಚಂದ್ರದಾರ, ಅಧಿಕಾರಿ ನಾರಾಯಣ ಎಸ್.ಎಸ್ ಉಪಸ್ಥಿತರಿದ್ದರು.







