ನಿಖಿಲ್ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ: ಸಾ.ರಾ. ಮಹೇಶ್
![ನಿಖಿಲ್ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ: ಸಾ.ರಾ. ಮಹೇಶ್ ನಿಖಿಲ್ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ: ಸಾ.ರಾ. ಮಹೇಶ್](https://www.varthabharati.in/sites/default/files/images/articles/2019/08/3/203671-1564853170.jpg)
ಹಾಸನ, ಆ.3: ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆ ಯಾವ ಚರ್ಚೆಯೂ ಇದುವರೆಗೂ ನಡೆದಿಲ್ಲ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ಪೇಟೆಯಿಂದ ನಿಖಿಲ್ ಸ್ಪರ್ಧೆ ವಿಚಾರ ಈಗ ರಾಜ್ಯಾದ್ಯಂತ ಚರ್ಚೆಯಲ್ಲಿದೆ. ಆದರೆ ಜೆಡಿಎಸ್ ವರಿಷ್ಠರು ಈ ಸುದ್ದಿ ಯಾರೋ ಸುಮ್ಮನೇ ಹರಡಿದ್ದಾರೆ ಎನ್ನುತ್ತಿದ್ದಾರೆ. ಇಂತಹ ಯಾವುದೇ ಚರ್ಚೆ ರಾಷ್ಟ್ರೀಯ ನಾಯಕರು ಹಾಗೂ ಕುಮಾರಸ್ವಾಮಿ ಬಳಿ ನಡೆದೇ ಇಲ್ಲ ಎಂದರು.
ನಿಖಿಲ್ ಸ್ಪರ್ಧಿಸಲಿ ಎಂಬುದು ಕೆಲ ಕಾರ್ಯಕರ್ತರ ಒತ್ತಡ. ಆದರೆ ಖಡಾ ಖಂಡಿತ ಅವರ ಸ್ಪರ್ಧೆ ಇಲ್ಲಾ ಎಂದು ತೀರ್ಮಾನ ಮಾಡಿ ಆಗಿದೆ ಎಂದ ಅವರು, ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಮುಂದೆ ಚರ್ಚಿಸುತ್ತೇವೆ. ಜೆಡಿಎಸ್ ಒಂದು ಕುಟುಂಬದ ಪಕ್ಷ ಎಂಬ ಆರೋಪ ಇತ್ತು. ಹಾಗಾಗಿಯೇ ಹಿಂದುಳಿದವರನ್ನು ಕರೆತಂದು ಅವಕಾಶ ನೀಡಲಾಗಿತ್ತು. ಆದರೆ ಅವರು ಹೀಗೆ ಮಾಡಿ ಹೋಗಿದ್ದಾರೆ ಎಂದು ಅನರ್ಹಗೊಂಡ ಹುಣಸೂರು ಶಾಸಕ ವಿಶ್ವನಾಥ್ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹುಣಸೂರಿನಲ್ಲಿಯೂ ಕಾರ್ಯಕರ್ತರ ಸಭೆ ಕರೆದು ಚರ್ಚೆ ಮಾಡಿದ ಬಳಿಕ ಪಕ್ಷದ ನಿಷ್ಟಾವಂತರಿಗೆ ಅವಕಾಶ ಕೊಡುವುದಾಗಿ ಹೇಳಿದರು.