ಕೊಳ್ಳೇಗಾಲ: ನೇಪಾಳ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ
![ಕೊಳ್ಳೇಗಾಲ: ನೇಪಾಳ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ ಕೊಳ್ಳೇಗಾಲ: ನೇಪಾಳ ಮೂಲದ ಯುವಕ ನೇಣು ಬಿಗಿದು ಆತ್ಮಹತ್ಯೆ](https://www.varthabharati.in/sites/default/files/images/articles/2019/08/3/203686-1564854586.jpg)
ಕೊಳ್ಳೇಗಾಲ, ಆ.3: ನೇಪಾಳ ಮೂಲದ ಯುವಕನೋರ್ವ ತಡ ರಾತ್ರಿ ಕೊಳ್ಳೇಗಾಲ ಪಟ್ಟಣದ ಮಧ್ಯ ಭಾಗದಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ.
ಪಟ್ಟಣದ ಓಂ ಶಕ್ತಿ ದೇವಸ್ಥಾನ ರಸ್ತೆಯ ಅಂಗಡಿಯೊಂದರ ಬಳಿ ಘಟನೆ ನಡೆದಿದ್ದು, ಅತಿನ್ ಖಡ್ಕ(28) ಎಂಬಾತನೇ ನೇಣಿಗೆ ಶರಣಾಗಿರುವ ನೇಪಾಳಿ ಯುವಕ.
ಮೃತ ಯುವಕನ ಬಟ್ಟೆಯಲ್ಲಿ ದೊರೆತ ಪಾಸ್ಪೋರ್ಟ್ನಿಂದ ಹೆಸರು ವಿಳಾಸ ತಿಳಿದು ಬಂದಿದ್ದು, ಆತ್ಮಯತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅತಿನ್ ಖಡ್ಕ ಅಂಗಡಿಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕೊಕ್ಕೆಗೆ ನೇಣು ಬಿಗಿದುಕೊಂಡಿದ್ದಾನೆ. ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಮನೆಯ ಹೊರ ಬಂದ ಸ್ಥಳೀಯ ನಿವಾಸಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮಾಹಿತಿ ಪಡೆದ ಟೌನ್ ಪಿಎಸ್ಐ ರಾಜೇಂದ್ರ ಅವರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಶವವನ್ನು ಉಪವಿಭಾಗ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದರು.
ಪಟ್ಟಣದಲ್ಲಿ ಯುವಕ ವಾಸವಿದ್ದ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಮೃತನ ಕುಟುಂಬದವರ ಪತ್ತೆಗೆ ಕ್ರಮ ಕೈಗೊಂಡಿರುವ ಪೊಲೀಸರು ಘಟನೆ ಬಗ್ಗೆ ಟಿಬೆಟ್ ಕ್ಯಾಂಪ್ಗಳಿಗೆ ಮಾಹಿತಿ ರವಾನಿಸಿದ್ದಾರೆ.
ಮೃತ ಯುವಕನ ವಾರಸುದಾರರು ಬರುವವರೆಗೆ ಶವವನ್ನು ಸುರಕ್ಷತೆಯ ದೃಷ್ಟಿಯಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿನ ಶೈತ್ಯಾಗಾರದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.