ಮೆಹಬೂಬಾ ಮುಫ್ತಿಗೆ ಭ್ರಷ್ಟ್ರಾಚರ ನಿಗ್ರಹ ದಳದ ನೋಟಿಸು
ಶ್ರೀನಗರ, ಆ. 4: ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರಿಗೆ ಜಮ್ಮು ಹಾಗೂ ಕಾಶ್ಮೀರದ ಭ್ರಷ್ಟಾಚಾರ ನಿಗ್ರಹ ದಳದಿಂದ ನೋಟಿಸು ಜಾರಿ ಮಾಡಿದೆ.
ಮೆಹಬೂಬಾ ಮುಫ್ತಿ ಜಮ್ಮ ಹಾಗೂ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಜೆಕೆ ಬ್ಯಾಂಕ್ನ ನೇಮಕಾತಿಯಲ್ಲಿ ಅವರ ಸಂಪುಟ ಸಹೋದ್ಯೋಗಿಗಳ ಶಿಫಾರಸಿಗೆ ಒಪ್ಪಿಗೆ ನೀಡಿರುವ ಆರೋಪದ ಕುರಿತು ಸ್ಪಷ್ಟನೆ ನೀಡುವಂತೆ ನಿರ್ದೇಶಿಸಿ ನಿಗ್ರಹ ದಳ ನೋಟಿಸು ಜಾರಿ ಮಾಡಿದೆ.
ಈ ನೋಟಿಸ್ ಅನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಮೆಹಬೂಬ್ ಮುಫ್ತಿ, ‘‘ಭ್ರಷ್ಟಾಚಾರ ನಿಗ್ರಹ ದಳ ನೋಟಿಸ್ ನೀಡಿರುವುದರಿಂದ ತನಗೆ ಯಾವುದೇ ಅಚ್ಚರಿ ಉಂಟಾಗಿಲ್ಲ. ಮುಖ್ಯವಾಹಿನಿಯ ನಾಯಕರನ್ನು ಬೆದರಿಸಲು ಇಂತಹ ಸಂಘಟಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂತಹ ಪ್ರಯತ್ನಗಳು ಫಲ ನೀಡಲಾರವು’’ ಎಂದು ಅವರು ಬರೆದುಕೊಂಡಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿತ್ತು. ಆದರೆ, ಸೈದ್ಧಾಂತಿಕ ಸಾಮರಸ್ಯದ ಕೊರತೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲ ಹಿಂದೆ ತೆಗೆದುಕೊಂಡಿತ್ತು. ಅನಂತರ ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು.