ಬಿಳಿ ಬಾವುಟ ತೋರಿಸಿ ಶವ ಕೊಂಡು ಹೋಗಿ: ಭಾರತದ ಸೇನೆಯ ಸೂಚನೆ ತಿರಸ್ಕರಿಸಿದ ಪಾಕಿಸ್ತಾನ
ಶ್ರೀಗರ, ಆ. 4: ಜಮ್ಮು ಹಾಗೂ ಕಾಶ್ಮೀರದ ಕೇರನ್ ವಲಯದಲ್ಲಿ ಶನಿವಾರ ಒಳ ನುಸುಳಲು ಪ್ರಯತ್ನಿಸಿದ ಪಾಕಿಸ್ತಾನದ ಬ್ಯಾಟ್ (ಬಾರ್ಡರ್ ಆ್ಯಕ್ಸನ್ ಟೀಮ್)ನ ಯೋಧರನ್ನು ಭದ್ರತಾ ಪಡೆ ಹೊಡೆದುರುಳಿಸಿದ ಬಳಿಕ 5ರಿಂದ 7 ಮೃತದೇಹ (ಬ್ಯಾಟ್ ಸೇನೆಯು ಯೋಧರು, ಭಯೋತ್ಪಾದಕರು)ಗಳನ್ನು ಹಿಂದೆ ಪಡೆದುಕೊಳ್ಳುವಂತೆ ಭಾರತದ ಸೇನೆ ರವಿವಾರ ಪಾಕಿಸ್ತಾನ ಸೇನೆಗೆ ತಿಳಿಸಿದೆ.
ಬಿಳಿ ಬಾವುಟದೊಂದಿಗೆ ಸಂಪರ್ಕಿಸಿ. ಅನಂತರ ಅಂತ್ಯಕ್ರಿಯೆಗಾಗಿ ಶವಗಳನ್ನು ಕೊಂಡೊಯ್ಯಿರಿ ಎಂದು ಭಾರತದ ಸೇನೆ ಪಾಕಿಸ್ತಾನದ ಸೇನೆಗೆ ತಿಳಿಸಿದೆ. ಆದರೆ, ಮೃತದೇಹಗಳನ್ನು ಹಿಂದೆ ಪಡೆದುಕೊಳ್ಳಲು ಪಾಕಿಸ್ತಾನದ ಸೇನೆ ನಿರಾಕರಿಸಿದೆ.
ಜಮ್ಮು ಹಾಗೂ ಕಾಶ್ಮೀರದ ಕೇರನ್ ವಲಯದಲ್ಲಿ ಬ್ಯಾಟ್ (ಪಾಕಿಸ್ತಾನದ ಬಾರ್ಡರ್ ಆ್ಯಕ್ಸನ್ ಟೀಮ್)ನ ಒಳ ನುಸುಳುವಿಕೆಯನ್ನು ಭದ್ರತಾ ಪಡೆ ವಿಫಲಗೊಳಿಸಿತ್ತು ಹಾಗೂ ಕನಿಷ್ಠ 5ರಿಂದ 7 ನುಸುಳುಕೋರರನ್ನು ಹತ್ಯೆಗೈದಿತ್ತು. ಬ್ಯಾಟ್ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ ಸಿಬ್ಬಂದಿ ಹಾಗೂ ಪಾಕಿಸ್ತಾನ ಪ್ರಾಯೋಜಿತ ಉಗ್ರರನ್ನು ಒಳಗೊಂಡಿದೆ.
‘‘ಭದ್ರತಾ ಪಡೆ ಬ್ಯಾಟ್ನ 5ರಿಂದ 7 ನುಸುಳುಕೋರರನ್ನು ಹತ್ಯೆಗೈದಿದೆ. ಅವರ ಮೃತದೇಹಗಳು ಗಡಿ ನಿಯಂತ್ರಣ ರೇಖೆಯಲ್ಲಿ ಬಿದ್ದುಕೊಂಡಿವೆ’’ ಎಂದು ಭಾರತದ ಸೇನೆ ಹೇಳಿಕೆ ತಿಳಿಸಿದೆ.
ಜುಲೈ 31 ಹಾಗೂ ಆಗಸ್ಟ್ 1ರ ನಡುವಿನ ರಾತ್ರಿ ಕೂಡ ಪಾಕಿಸ್ತಾನದ ಶಸಸ್ತ್ರ ಸೇನಾ ಪಡೆ ಒಳನುಸುಳಲು ಪ್ರಯತ್ನಿಸಿತು ಎಂದು ಅವರು ತಿಳಿಸಿದ್ದಾರೆ.