ಕನ್ನಡ ಭಾಷೆ ತನ್ನ ನೆಲದಲ್ಲಿಯೇ ಪರಕೀಯವಾಗಿದೆ: ಸಾಹಿತಿ ದೊಡ್ಡರಂಗೇಗೌಡ
![ಕನ್ನಡ ಭಾಷೆ ತನ್ನ ನೆಲದಲ್ಲಿಯೇ ಪರಕೀಯವಾಗಿದೆ: ಸಾಹಿತಿ ದೊಡ್ಡರಂಗೇಗೌಡ ಕನ್ನಡ ಭಾಷೆ ತನ್ನ ನೆಲದಲ್ಲಿಯೇ ಪರಕೀಯವಾಗಿದೆ: ಸಾಹಿತಿ ದೊಡ್ಡರಂಗೇಗೌಡ](/images/placeholder.jpg)
ಬೆಂಗಳೂರು, ಆ.4: ಕನ್ನಡ ಭಾಷೆ ತನ್ನ ನೆಲದಲ್ಲಿಯೇ ಪರಕೀಯವಾಗಿದೆ ಎಂದು ಎಂದು ಸಾಹಿತಿ ದೊಡ್ಡರಂಗೇಗೌಡ ವಿಷಾದಿಸಿದರು.
ರವಿವಾರ ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ಸೋಮಣ್ಣ ಪ್ರತಿಷ್ಠಾನ ಆಯೋಜಿಸಿದ್ದ ಡಾ.ಶಿವಕುಮಾರಸ್ವಾಮಿಗಳವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಮಾತನಾಡುವವರೇ ಅಪರೂಪವಾದಂತೆ ಭಾಸವಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಿಗೆ ಹೋದರಂತು ಹೊರದೇಶದಲ್ಲಿದ್ದೇವೆ ಎಂಬ ಅನುಮಾನ ಹುಟ್ಟುತ್ತದೆ. ನಮ್ಮ ನೆಲದಲ್ಲಿಯೇ ನಾವು ಪರಕೀಯರಾಗಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತಿಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಹದಗೆಟ್ಟಿದೆ, ಅವಿಭಕ್ತ ಕುಟುಂಬ ನಾಶವಾಗಿದೆ. ಆದ್ದರಿಂದಲೇ ಯುವಪೀಳಿಗೆಯಲ್ಲಿ ಮೌಲ್ಯಪಾತವಾಗುತ್ತಿದೆ ಮತ್ತು ವಿನಯವಂತಿಕೆ ನಾಪತ್ತೆಯಾಗಿದೆ. ಮಕ್ಕಳಲ್ಲಿ ವಿದ್ಯೆಯ ಮೂಲಕ ವಿನಯ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ನ ನಿವೃತ್ತ ನ್ಯಾ.ಅಶೋಕ್ ಬಿ.ಹಿಂಚಿಗೇರಿ ಮಾತನಾಡಿ, ಮಕ್ಕಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಸಂಸ್ಕಾರವಂತ ಮಕ್ಕಳನ್ನು ಸಮಾಜಕ್ಕೆ ನೀಡುವಲ್ಲಿ ತಾಯಿಯ ಪಾತ್ರ ಬಹುದೊಡ್ಡದು. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಶ್ರಮ ಪಡಬೇಕು, ಓದನ್ನು ತಪ್ಪಸ್ಸಿನಂತೆ ಸ್ವೀಕರಿಸಬೇಕು, ನಯವಾದ ಸ್ವಭಾವವನ್ನು ಬೆಳೆಸಿಕೊಳ್ಳಬೇಕು, ಒಬ್ಬ ಪರಿಪೂರ್ಣ ಮನುಷ್ಯನಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಬಡವರ ಮತ್ತು ಹಳ್ಳಿಗಾಡಿನಿಂದ ಬಂದು ವ್ಯಾಸಂಗ ಮಾಡುವ ಮಕ್ಕಳನ್ನು ಸೋಮಣ್ಣನವರು ಪ್ರೋತ್ಸಾಹಿಸುತ್ತಾರೆ. ಇದೇ ರೀತಿ ಎಲ್ಲಾ ಶಾಸಕರು, ಪಾಲಿಕೆ ಸದಸ್ಯರು ಕಾರ್ಯೋನ್ಮುಖವಾದರೆ ಕರ್ನಾಟಕ ಸುಖಿರಾಜ್ಯವಾಗುತ್ತದೆ ಎಂದು ತಿಳಿಸಿದರು.
ಶಾಸಕ ವಿ.ಸೋಮಣ್ಣ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರ ಪ್ರೇರಣೆ ಪಡೆದು ಸಣ್ಣಪುಟ್ಟ ಸಮಾಜಸೇವೆಯಲ್ಲಿ ತೊಡಗಿದ್ದೇನೆ. ಸ್ವಾಮೀಜಿಯವರ ಅನ್ನದಾಸೋಹ ಕಾರ್ಯವು ಎಸ್.ಎಂ.ಕೃಷ್ಣ ಅವರು ಶಾಲೆಗಳಲ್ಲಿ ಬಿಸಿಯೂಟ ಯೋಜನೆ ತರಲು ಕಾರಣವಾಯಿತು. ಅವರು ಕೊಟ್ಟ ಅನ್ನದಾಸೋಹ ಮತ್ತು ಕಾಯಕ ಕುರಿತ ಚಿಂತನೆಗಳು ದೇಶವನ್ನು ವ್ಯಾಪಿಸಿತು. ಶಿವಕುಮಾರ ಸ್ವಾಮೀಜಿ ಮತ್ತು ಬಾಲಗಂಗಾಧರಸ್ವಾಮೀಜಿ ಅವರು ರಾಷ್ಟ್ರಕ್ಕೆ ಕೊಟ್ಟಿರುವ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸರಕಾರಿ, ಬಿಬಿಎಂಪಿ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಭಾಲ್ಕಿ ಹಿರೇಮಠ ಮಹಾಸಂಸ್ಥಾನದ ಡಾ.ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಕಿರಿ ಸ್ವಾಮೀಜಿ ಗುರುಬಸವ ಪಟ್ಟದೇವರು, ವಿಧಾನಪರಿಷತ್ತಿನ ಸದಸ್ಯ ಅ.ದೇವೇಗೌಡ ಮತ್ತು ಚಂದ್ರಮೌಳಿ ಉಪಸ್ಥಿತರಿದ್ದರು.
‘ಮಕ್ಕಳೂ ಅಜ್ಜಿ-ಅಜ್ಜರೊಂದಿಗೆ ಆಂಗ್ಲಭಾಷೆಯಲ್ಲಿ ವ್ಯವಹರಿಸಲು ಇಚ್ಛಿಸುತ್ತಾರೆ. ಇಂಗ್ಲೀಷ್ ಭಾಷೆ ಮಹತ್ವ ಪಡೆದಿದ್ದರೂ ನಮ್ಮ ಮೊದಲ ಆದ್ಯತೆ ಕನ್ನಡವಾಗಬೇಕು. ಕನ್ನಡದಲ್ಲಿ ವೈಜ್ಞಾನಿಕವಾಗಿ, ವೈಚಾರಿಕವಾಗಿ ಅಭಿವ್ಯಕ್ತಿಸಲು ಸಾಧ್ಯ’
-ದೊಡ್ಡರಂಗೇಗೌಡ, ಸಾಹಿತಿ