ಗುಂಪು ಹತ್ಯೆ ವಿರೋಧಿ ಮಸೂದೆ ರಾಜಸ್ಥಾನ ವಿಧಾನಸಭೆಯಲ್ಲಿ ಅಂಗೀಕಾರ
ಜೀವಾವಧಿ ಶಿಕ್ಷೆ, 5 ಲಕ್ಷ ರೂ. ದಂಡ

ಜೈಪುರ, ಆ. 5: ಸಂತ್ರಸ್ತನ ಸಾವಿಗೆ ಕಾರಣವಾಗುವ ಗುಂಪಿನಿಂದ ಥಳಿತದ ಪ್ರಕರಣಗಳಲ್ಲಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸುವ ಮಸೂದೆಯನ್ನು ರಾಜಸ್ಥಾನ ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು.
‘‘ಆಯ್ಕೆ ಸಮಿತಿಗೆ ಮಸೂದೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ ಪ್ರತಿಪಕ್ಷ ಬಿಜೆಪಿಯ ತೀವ್ರ ಪ್ರತಿಭಟನೆಯ ನಡುವೆ ‘‘ರಾಜಸ್ಥಾನ ಗುಂಪಿನಿಂದ ಥಳಿಸಿ ಹತ್ಯೆಯಿಂದ ರಕ್ಷಣೆ ಮಸೂದೆ-2019’’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ಸಂಸದೀಯ ವ್ಯವಹಾರಗಳ ಸಚಿವ ಶಾಂತಿ ಧರಿವಾಲ್ ಅವರು ಕಳೆದ ವಾರ ರಾಜ್ಯ ವಿಧಾನ ಸಭೆಯಲ್ಲಿ ಈ ಮಸೂದೆ ಮಂಡಿಸಿದ್ದರು.
ಸೋಮವಾರ ಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ ಧರಿವಾಲ್, ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳನ್ನು ನಿಗ್ರಹಿಸಲು ಈಗಾಗಲೇ ಭಾರತೀಯ ದಂಡ ಸಂಹಿತೆ ಹಾಗೂ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಇದೆ. ಆದರೆ, ಇದು ಸಾಕಾಗುವುದಿಲ್ಲ ಎಂದು ಹೇಳಿದ್ದರು. ಗುಂಪಿನಿಂದ ಥಳಿಸಿ ಹತ್ಯೆಯಂತಹ ಘಟನೆಗಳನ್ನು ನಿಗ್ರಹಿಸಲು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಈ ಮಸೂದೆ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಕೆಟ್ಟತನವನ್ನು ಮೊಗ್ಗಿನಿಂದಲೇ ಚಿವುಟಿ ಹಾಕಲು ಅಥವಾ ದ್ವೇಷವನ್ನು ಹರಡುವುದನ್ನು ತಡೆಯುವ ಶಿಫಾರಸನ್ನು ಮಸೂದೆ ಹೊಂದಿದೆ ಎಂದು ಮಸೂದೆಯ ಉದ್ದೇಶ ಹಾಗೂ ಕಾರಣದಲ್ಲಿ ಹೇಳಲಾಗಿದೆ.