ಅಯೋಧ್ಯೆ ಪ್ರಕರಣ: ಕಲಾಪದ ನೇರಪ್ರಸಾರ ಕೋರಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಹೊಸದಿಲ್ಲಿ, ಆ.5: ಅಯೋಧ್ಯೆ ಭೂವಿವಾದಕ್ಕೆ ಸಂಬಂಧಿಸಿದ ನ್ಯಾಯ ವಿಚಾರಣೆಯ ನೇರಪ್ರಸಾರ ಮಾಡಬೇಕೆಂಬ ಅರ್ಜಿಯನ್ನು ತುರ್ತು ಕೈಗೆತ್ತಿಕೊಳ್ಳಬೇಕೆಂಬ ಮನವಿಯನ್ನು ನಿರಾಕರಿಸಿದ ಸುಪ್ರೀಂಕೋರ್ಟ್, ಮನವಿಯ ಬಗ್ಗೆ ಆಡಳಿತಾತ್ಮಕ ದೃಷ್ಟಿಯಿಂದ ಪರಿಗಣಿಸುವುದಾಗಿ ತಿಳಿಸಿದೆ.
ನ್ಯಾಯಾಲಯದ ಕಾರ್ಯಕಲಾಪಗಳ ದಾಖಲಾತಿ ಹಾಗೂ ನೇರಪ್ರಸಾರಕ್ಕೆ ಅಗತ್ಯವಿರುವ ಸಾಧನಗಳು ನ್ಯಾಯಾಲಯದ ಬಳಿ ಇವೆಯೇ ಎಂಬ ಮಾಹಿತಿಯಿಲ್ಲ. ಆದ್ದರಿಂದ ಆಡಳಿತಾತ್ಮಕ ವ್ಯವಸ್ಥೆಯನ್ನು ಗಮನಿಸಿ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಾಧೀಶರಾದ ಎಸ್ಎ ಬೊಬ್ಡೆ ಮತ್ತು ಬಿಆರ್ ಗವಾಯಿ ಅವರಿದ್ದ ನ್ಯಾಯಪೀಠ ಹೇಳಿದೆ.
ಆರೆಸ್ಸೆಸ್ ಮುಖಂಡ ಕೆಎನ್ ಗೋವಿಂದಾಚಾರ್ಯ ಅರ್ಜಿ ಸಲ್ಲಿಸಿದ್ದರು. ನೇರಪ್ರಸಾರಕ್ಕೆ ಅಗತ್ಯ ವ್ಯವಸ್ಥೆ ಇಲ್ಲದಿದ್ದರೆ, ಕಲಾಪಗಳನ್ನು ತಾತ್ಕಾಲಿಕವಾಗಿ ದಾಖಲಿಸಿಕೊಳ್ಳುವಂತೆ ಸೂಚಿಸಬೇಕು ಎಂದವರು ಕೋರಿದ್ದರು.
ಅಯೋಧ್ಯೆ ವಿವಾದದ ಪರಿಹಾರಕ್ಕೆ ನೇಮಿಸಲಾಗಿದ್ದ ಸಂಧಾನ ತಂಡ ವಿಫಲವಾದ ಕಾರಣ ಮಂಗಳವಾರದಿಂದ ಈ ಪ್ರಕರಣವನ್ನು ದಿನಾ ವಿಚಾರಣೆ ನಡೆಸಬೇಕೆಂದು ಕಳೆದ ವಾರ ಸುಪ್ರೀಂ ಸೂಚಿಸಿತ್ತು.