ಮನುಸ್ಮೃತಿಗಿಂತ ವಚನಸ್ಮೃತಿ ಬದುಕಿನ ಭಾಗವಾಗಬೇಕು: ಪ್ರೊ.ಅರವಿಂದ ಮಾಲಗತ್ತಿ
![ಮನುಸ್ಮೃತಿಗಿಂತ ವಚನಸ್ಮೃತಿ ಬದುಕಿನ ಭಾಗವಾಗಬೇಕು: ಪ್ರೊ.ಅರವಿಂದ ಮಾಲಗತ್ತಿ ಮನುಸ್ಮೃತಿಗಿಂತ ವಚನಸ್ಮೃತಿ ಬದುಕಿನ ಭಾಗವಾಗಬೇಕು: ಪ್ರೊ.ಅರವಿಂದ ಮಾಲಗತ್ತಿ](https://www.varthabharati.in/sites/default/files/images/articles/2019/08/6/204025-1565030382.jpg)
ಮೈಸೂರು,ಆ.5: ಶರಣ ಸಂವಿಧಾನವನ್ನು ಭಾರತದ ಸಂವಿಧಾನವನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ. ಮನುಸ್ಮೃತಿಗಿಂತ ವಚನಸ್ಮೃತಿ ಬದುಕಿನ ಭಾಗವಾಗಬೇಕು ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು.
ನಗರದ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಸಹಮತ ವೇದಿಕೆ ವತಿಯಿಂದ ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪನವರು ರಚಿಸಿದ 'ವಚನ ಚಳವಳಿಯ ಸಂದರ್ಭದ ಚಿತ್ರಗಳ ಪ್ರದರ್ಶನ' ಮತ್ತು 'ಮತ್ತೆ ಕಲ್ಯಾಣಕ್ಕೆ ಬಾ ಬಸವಣ್ಣ' ಚಿತ್ರದ ಬಿಡುಗಡೆಯನ್ನು ನೆರವೇರಿಸಿ, ಕಿರುರಂಗಮಂದಿರದಲ್ಲಿ “ಮತ್ತೆ ಕಲ್ಯಾಣ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮತ್ತೆ ಅಸ್ಪೃಶ್ಯತೆಯ ನಿವಾರಣೆ, ಮತ್ತೆ ಮೌಢ್ಯತೆಯ ಪರಿಹಾರ, ಮತ್ತೆ ಜನಸಮುದಾಯದೊಂದಿಗೆ ಬೆರೆಯುವ ಪ್ರಕ್ರಿಯೆ ಎಂದು ಅರ್ಥೈಸಿಕೊಳ್ಳುತ್ತೇನೆ. ವಚನಗಳು ಸರಳ, ನೇರ, ನಿಷ್ಠುರ. ವಚನ ಶರಣರ ಸಂಪತ್ತು ಮಾತ್ರವಲ್ಲ. ಶರಣರ ಸಂವಿಧಾನ. ಈ ಶರಣ ಸಂವಿಧಾನವನ್ನು ಭಾರತದ ಸಂವಿಧಾನವನ್ನಾಗಿ ಮಾಡಿಕೊಳ್ಳುವ ಅಗತ್ಯವಿದೆ. ಮನುಸ್ಮೃತಿಗಿಂತ ವಚನಸ್ಮೃತಿ ಬದುಕಿನ ಭಾಗವಾಗಬೇಕು. ಭಾರತದ ಸಂವಿಧಾನಕ್ಕೆ ವಚನ ಸಂವಿಧಾನವೇ ಪ್ರತಿಕೃತಿ ಇದ್ದ ಹಾಗೆ. ಹೀಗಾಗಿ ಮತ್ತೆ ಕಲ್ಯಾಣ ಎನ್ನುವುದು ಮತ್ತೆ ಸಂವಿಧಾನದ ಮರುಸ್ಮರಣೆ ಅಥವಾ ಮರುಕಲಿಕೆ ಎಂದರು.
ಹೀಗಾಗಿ ಈ ಆಂದೋಲನ ಕೇವಲ ಕರ್ನಾಟಕದಲ್ಲಿ ಮಾತ್ರ ಪಸರಿಸದೇ ಕರ್ನಾಟಕದ ಆಚೆಗೂ ಕೂಡ ಇದು ಗಡಿ ಮೀರಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 12ನೇ ಶತಮಾನದಲ್ಲಿ ನಡೆದ ಚಳವಳಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕಲ್ಯಾಣಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ಭೂಮಿಕೆಯನ್ನೇ ಕಲ್ಯಾಣವಾಗಿಸುವುದು ಹೇಗೆ ? ಅನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿತ್ತು. ಆ ಪರಿಕಲ್ಪನೆಯನ್ನೇ ಇಟ್ಟು ಇಂದು ಮತ್ತೆ ಕಲ್ಯಾಣವೆನ್ನುವ ಆಂದೋಲನವೇನಿದೆ ಅದು ಅತ್ಯಂತ ಅರ್ಥಪೂರ್ಣ. ಇವತ್ತಿನ ಸಂದರ್ಭದಲ್ಲಿ ಹೆಚ್ಚು ನೈತಿಕ ಮತ್ತು ತಾತ್ವಿಕ ನೆಲೆಯಿಂದ ಕೂಡಿದ ಬದುಕನ್ನು ರೂಪಿಸಲು ಪೂರಕ ಎಂದರು.
ಸಾಮಾಜಿಕ ಮಾಧ್ಯಮಗಳಿಗೆ ಯುವಜನತೆ ಸಂಪೂರ್ಣವಾಗಿ ಬಲಿಯಾಗುತ್ತಿದೆ. ಅದರಿಂದ ಅವರನ್ನು ಹೊರತರುವುದು ಹೇಗೆ ? ಸಾಹಿತ್ಯ ಕ್ಷೇತ್ರದಲ್ಲಿರುವ ಈ ಸ್ವರೂಪದ ತಾತ್ವಿಕ ನೆಲೆಗಟ್ಟನ್ನು ಅವರಿಗೆ ಕೊಟ್ಟಿದ್ದೇ ಆದರೆ, ಅದನ್ನು ಅರ್ಥಪೂರ್ಣವಾಗಿ ಗ್ರಹಿಸಿಕೊಂಡಿದ್ದೇ ಆದರೆ ಮಾದಕ ಲೋಕದಿಂದ ಹೊರಬರಲು ಸಾಧ್ಯ ಎಂಬ ಮಾತು ಅಪ್ಯಾಯಮಾನ. ಇಂತಹ ಆಲೋಚನೆ ಹೊಂದಿರುವ ಮತ್ತೆ ಕಲ್ಯಾಣ ಕೇವಲ ತಳಸಮುದಾಯಗಳಿಗೆ ಮಾತ್ರ ಸೀಮಿತವಾಗದೆ, ಮೇಲ್ಸಮುದಾಯಗಳಿಗೂ ಬುದ್ಧಿವಾದ ಹೇಳುವ, ಮರಳಿ ಮತ್ತೆ ಗೂಡಿಗೆ ಕರೆತರುವ ಕೆಲಸವನ್ನು ಇದು ಮಾಡಲಿದೆ ಎಂದರು.
ಕಲಾವಿದ ಎಲ್.ಶಿವಲಿಂಗಪ್ಪ ಮಾತನಾಡಿ, ಬಸವಣ್ಣನವರ ಚಿತ್ರಕ್ಕೆ ಬಣ್ಣ ತುಂಬುವ ಪುಸ್ತಕವನ್ನು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ಆರ್ಟ್ ಗ್ಯಾಲರಿ ಪ್ರಕಟಿಸಿದ್ದು, ಈ ಪುಸ್ತಕದಲ್ಲಿ ವಚನರಚನೆಯಲ್ಲಿ ಬಸವಣ್ಣ, ದೇವನೊಬ್ಬ ನಾಮಹಲವು, ಇಷ್ಟಲಿಂಗ ಲಿಂಗಪೂಜಾ ವಿಧಾನ ತೋರಿದ ಬಸವಣ್ಣ, ಕೂಡಲಸಂಗಮ ಕರುಣಾಮಯಿ ಬಸವಣ್ಣ, ಕಾಯಕ ಜೀವಿಗಳನ್ನು ಅಪ್ಪಿಕೊಳ್ಳುವ ಬಸವಣ್ಣ ಮುಂತಾದ 16 ಚಿತ್ರಗಳಿದ್ದು ಇವುಗಳಿಗೆ ಮಕ್ಕಳು ಬಣ್ಣ ಹಚ್ಚುವ ಮೂಲಕ ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗ ಇವುಗಳ ಧಾರಣೆಯ ಕಲ್ಪನೆ ಮಕ್ಕಳಲ್ಲಿ ಮೂಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಬಸವಪ್ರಜ್ಞೆ ಮೂಡಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಾಹಿತಿ ಪ್ರೊ.ಕೆ.ಭಗವಾನ್, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ವಚನ ಗಾಯನ, ವಚನ ವಾಚನ, ಹೆಸರಾಂತ ಚಿತ್ರ ಕಲಾವಿದರಿಂದ ಚಿತ್ರರಚನಾ ಕಾರ್ಯಕ್ರಮ ನಡೆಯಿತು.