ಜಮ್ಮು ಕಾಶ್ಮೀರ: ಕ್ಷೇತ್ರಗಳ ಪುನರ್ ವಿಂಗಡಣೆ ಶೀಘ್ರ

ಹೊಸದಿಲ್ಲಿ: ಜಮ್ಮು- ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ತಕ್ಷಣ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಚುನಾವಣಾ ಆಯೋಗ ಪ್ರತ್ಯೇಕ ಆಯೋಗವನ್ನು ಶೀಘ್ರವೇ ನೇಮಕ ಮಾಡಲಿದೆ.
ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯ ಅನ್ವಯ ಚುನಾವಣಾ ಆಯೋಗ ಕ್ಷೇತ್ರಗಳ ಪುನರ್ವಿಂಗಡಣೆಗೆ ಕ್ರಮ ಕೈಗೊಳ್ಳುವುದನ್ನು ಕಡ್ಡಾಯಪಡಿಸಿದೆ. ಉಭಯ ಸದನಗಳಲ್ಲಿ ಇದು ಆಂಗೀಕಾರವಾದ ತಕ್ಷಣ ಈ ಕಾರ್ಯವನ್ನು ಆಯೋಗ ಕೈಗೆತ್ತಿಕೊಳ್ಳಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಈ ಮಸೂದೆಯ ಪ್ರಕಾರ, ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಶಾಸನಸಭೆ ಇರುವುದಿಲ್ಲ.
ಉಳಿದಂತೆ ಶಾಸನಸಭೆ ಇರುವ ಪ್ರದೇಶಗಳ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಲಾಗುತ್ತದೆ. ರಾಜ್ಯಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಆಂಗೀಕಾರವಾಗಿರುವ ಮಸೂದೆಯನ್ನು ಮಂಗಳವಾರ ಲೋಕಸಭೆ ಆಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಿದೆ. ಇದರ ಅನ್ವಯ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ 114 ಸದಸ್ಯರು ಹಾಗೂ ಇಬ್ಬರು ನಾಮನಿರ್ದೇಶನ ಸದಸ್ಯರು ಇರುತ್ತಾರೆ. ಪ್ರಸ್ತುತ ವಿಧಾನಸಭೆ 111 ಸದಸ್ಯರನ್ನು ಹಾಗೂ ಇಬ್ಬರು ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ. ಈ ಪೈಕಿ 87 ಮಂದಿ ಚುನಾಯಿತ ಸದಸ್ಯರಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ 24 ಸ್ಥಾನಗಳನ್ನು ಖಾಲಿ ಬಿಡಲಾಗಿದೆ.
87 ಸ್ಥಾನಗಳ ಪೈಕಿ 46 ಸ್ಥಾನಗಳು ಕಾಶ್ಮೀರದಲ್ಲಿದ್ದು, ಜಮ್ಮುವಿನಲ್ಲಿ 37 ಹಾಗೂ ಲಡಾಖ್ ಪ್ರದೇಶದಲ್ಲಿ ನಾಲ್ಕು ಸ್ಥಾನಗಳಿವೆ. 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. ಆದರೆ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ವಿಧಾನಸಭೆ ಚುನಾವಣೆ ನಡೆಯುತ್ತದೆಯೋ ಅಥವಾ ಮುನ್ನವೇ ನಡೆಯುವುದೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ 2026ರವರೆಗೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡದಂತೆ ಒತ್ತಾಯಿಸಿವೆ. ಜಮ್ಮು ಪ್ರದೇಶಕ್ಕೆ ಹೆಚ್ಚು ಸ್ಥಾನಗಳನ್ನು ನೀಡುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಈ ಪಕ್ಷಗಳದ್ದು. ಈ ಹಿಂದೆ 2002ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ನಡೆದಿತ್ತು ಹಾಗೂ 2026ರವರೆಗೆ ಕ್ಷೇತ್ರಗಳ ಪುನರ್ ವಿಂಗಡಣೆಗೆ ಅವಕಾಶವಿಲ್ಲ ಎಂದು ವಿಧಾನಸಭೆ ನಿರ್ಣಯ ಆಂಗೀಕರಿಸಿತ್ತು.