ಜಮ್ಮು –ಕಾಶ್ಮೀರ ಪುನಾರಚನೆ ವಿಧೇಯಕ ಲೋಕಸಭೆಯಲ್ಲಿ ಮಂಡನೆ

ಹೊಸದಿಲ್ಲಿ, ಆ.6: ಕಣಿವೆ ರಾಜ್ಯ ಜಮ್ಮು –ಕಾಶ್ಮೀರ ಪುನಾರಚನೆ ವಿಧೇಯಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು.
ರಾಷ್ಟ್ರಪತಿಯವರಿಂದ ಅಂಗೀಕಾರ ದೊರೆತ ಬಳಿಕ ಲೋಕಸಭೆಯಲ್ಲಿ ಈ ವಿಧೇಯಕವನ್ನು ಸಚಿವ ಅಮಿತ್ ಶಾ ಮಂಡಿಸಿದರು. ಸೋಮವಾರ ರಾಜ್ಯಸಭೆಯಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು.
ಕಾಂಗ್ರೆಸ್ ನಿಂದ ಲೋಕಸಭೆಯಲ್ಲಿ ವಿಧೇಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ವಿರೋಧ ವ್ಯಕ್ತಪಡಿಸಿದಾಗ ಸಚಿವ ಅಮಿತ್ ಶಾ ನಾವು ಯಾವ ನಿಯಮವನ್ನು ಮೀರಿದ್ದೇವೆ ? ಜಮ್ಮುಗೆ ವಿಶ್ವಸಂಸ್ಥೆಯ ಉಸ್ತುವಾರಿ ಬೇಕಾ ? ಹೀಗೆ ಕಾಂಗ್ರೆಸ್ ಬಯಸುತ್ತಿದೆಯಾ ಎಂದ ಹೇಳಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಮ್ಮು-ಕಾಶ್ಮೀರ ವಿಚಾರದ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಲಿ ಎಂದು ಚೌಧರಿ ಒತ್ತಾಯಿಸಿದರು.
ಜಮ್ಮು –ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವೂ (ಪಿಓಕೆ) ಅದರ ಭಾಗವೇ ಆಗಿದೆ. ಅದಕ್ಕಾಗಿ ನಾವು ಪ್ರಾಣತ್ಯಾಗಕ್ಕೂ ಸಿದ್ಧ. ಜಮ್ಮು-ಕಾಶ್ಮೀರ ವಿಚಾರದಲ್ಲಿ ಕಾನೂನು ರಚನೆ ಮಾಡುವುದು ಅಗತ್ಯವಾಗಿತ್ತು. ಪುನಾರಚನೆ ವಿಧೇಯಕ ಕೇವಲ ರಾಜಕೀಯವಲ್ಲ,ಕಾನೂನು ವಿಚಾರವಾಗಿದೆ, ಸಂವಿಧಾನದ ಪ್ರಕಾರವೇ ನಾವು ಪುನಾರಚನೆ ನಿರ್ಧಾರ ಕೈಗೊಂಡಿದ್ದೇವೆ. ನಮ್ಮ ವಿಧೇಯಕಕ್ಕೆ ರಾಷ್ಟ್ರಪತಿ ಸಮ್ಮತಿ ನೀಡಿದ್ದಾರೆ ಎಂದು ಶಾ ಸ್ಪಷ್ಟನೆ ನೀಡಿದರು.
ಜಮ್ಮು-ಕಾಶ್ಮೀರದ ಇತಿಹಾಸದ ಬಗ್ಗೆ ಮತ್ತೆ ನೆನಪಿಸಿಕೊಳ್ಳಬೇಕಿದೆ. ಆಧುನಿಕ ಕಾಶ್ಮೀರದ ನಿರ್ಮಾಣ ಹೇಗೆ ಆಯಿತು ಅನ್ನೋದನ್ನು ನೋಡಬೇಕಾಗಿದೆ ಎಂದು ಕಾಂಗ್ರೆಸ್ ನ ಮನೀಷ್ ತಿವಾರಿ ಹೇಳಿದರು.
ಕಳೆದ 70 ವರ್ಷಗಳಲ್ಲಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಮಾಡಿರುವುದನ್ನು ನೋಡಿದ್ದೇವೆ. ಆದರೆ ರಾಜ್ಯವನ್ನು ಇದೇ ಮೊದಲ ಬಾರಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಇದಕ್ಕಿಂತ ದೊಡ್ಡ ಆಘಾತ ಯಾವುದೂ ಇಲ್ಲ. ಜಮ್ಮು- ಕಾಶ್ಮೀರದಲ್ಲಿ ಪ್ರಸ್ತುತ ವಿಧಾನಸಭೆಯೇ ಇಲ್ಲ. ವಿಧಾನಸಭೆಯನ್ನು ಬಂದ್ ಮಾಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿವಾರಿ ಅಭಿಪ್ರಾಯಪಟ್ಟರು.