ಚಿಕ್ಕಮಗಳೂರಿನಲ್ಲಿ ಗಾಳಿ ಸಹಿತ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
► ಹೆಬ್ಬಾಳೆ ಸೇತುವೆ ಮುಳುಗಡೆ ►ಗದ್ದೆಗಳು ಜಲಾವೃತ, ಮನೆಗಳಿಗೆ ನುಗ್ಗಿದ ನದಿ ನೀರು

ಚಿಕ್ಕಮಗಳೂರು, ಆ.6: ಕಾಫಿನಾಡಿನಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ, ಗಾಳಿಯಿಂದಾಗಿ ತುಂಗಾ, ಭದ್ರಾ, ಹೇಮಾವತಿ ಸೇರಿದಂತೆ ಸಣ್ಣಪುಟ್ಟ ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೆಲವೆಡೆ ನದಿಯ ನೆರೆನೀರು ಅಕ್ಕ ಪಕ್ಕದ ಜಮೀನು, ಭತ್ತದ ಗದ್ದೆಗಳಿಗೆ ಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕೆಲವೆಡೆ ರಸ್ತೆಯ ಮೇಲೆ ಮರಗಳು ಬಿದ್ದು, ವಿದ್ಯುತ್ ಕಂಬಗಳು, ಕಲ್ಲುಬಂಡೆಗಳು, ಧರೆ ಕುಸಿದು ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದ್ದ ಘಟನೆಗಳು ವರದಿಯಾಗಿವೆ.
ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕುಗಳಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಜೀವನದಿಗಳಾದ ತುಂಗ, ಭದ್ರಾ ಮತ್ತು ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಕಳಸ ತಾಲೂಕು ವ್ಯಾಪ್ತಿಯ ಕಳಸ ಪಟ್ಟಣದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಸೋಮವಾರ ರಾತ್ರಿಯಿಂದ 2 ಬಾರಿ ನದಿಯಲ್ಲಿ ಮುಳುಗಿ ಹೋಗಿತ್ತು. ಕಳಸದಿಂದ ಹೊರನಾಡಿಗೆ ಹೋಗುವ ವಾಹನಗಳು ಬದಲಿ ರಸ್ತೆಯಾದ ಹಳುವಳ್ಳಿಯ ಮೂಲಕ ಸಂಚರಿಸುತ್ತಿದ್ದವು. ಶೃಂಗೇರಿ ಪಟ್ಟಣದಲ್ಲಿ ಶಾರದಾಂಬೆ ದೇವಾಲಯ ಸಮೀಪದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ದೇವಾಲಯದ ಮೆಟ್ಟಿಲುಗಳು ಹಾಗೂ ಗಾಂಧಿಮೈದಾನ ಜಲಾವೃತಗೊಂಡಿವೆ. ಇನ್ನೂ ಮೂಡಿಗೆರೆ ತಾಲೂಕಿನ ಹೇಮಾವತಿ ನದಿಯಲ್ಲಿ ನೀರಿನ ಹರಿವು ಏರಿಕೆಯಾದ ಪರಿಣಾಮ ನದಿ ಪಾತ್ರದ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಕೆಲವೆಡೆ ತೋಟ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿದೆ.
ಎನ್.ಆರ್.ಪುರ ತಾಲೂಕಿನ ಮಾಗುಂಡಿ, ಬಾಳೆಹೊನ್ನೂರಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಭದ್ರಾ ನದಿಯ ನೀರು ಮಂಗಳವಾರ ಬೆಳಗ್ಗೆ ಬಾಳೆಹೊನ್ನೂರು ಪಟ್ಟಣದ ದೋಬಿಹಳ್ಳದ ಪಕ್ಕದ ಅಡಕೆ ತೋಟಕ್ಕೆ ನುಗ್ಗಿದ್ದಲ್ಲದೆ, ತಗ್ಗು ಪ್ರದೇಶದಲ್ಲಿದ್ದ ಕೆಲವು ಅಂಗಡಿಗಳಿಗೂ ನದಿ ನೀರು ನುಗ್ಗಿತ್ತು. ತಾಲೂಕಿನ ಬಡಗಬೈಲ್ ಗ್ರಾಮದ ಕನಗೇರಿಯ ಎಲ್ಡೋ ಅವರ ಮನೆಯ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಮುತ್ತಿನಕೊಪ್ಪ ಶಂಕರಪುರದಿಂದ ಮುಡುಬ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ನದಿಯ ನೀರು ಮಧುಶೆಟ್ಟಿ ಎಂಬವರ ತೋಟಕ್ಕೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಶೃಂಗೇರಿ ತಾಲೂಕಿನಾದ್ಯಂತ ಸತತವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹದ ಭೀತಿ ಎದುರಾಗಿದೆ. ಮಂಗಳವಾರ ತುಂಗಾ ನದಿಯ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಹಾಗೂ ಸಂದ್ಯಾವಂದನ ಮಂಟಪ ಮುಳುಗಡೆಯಾಗಿದೆ. ಗಾಂಧಿನಗರಕ್ಕೂ ನೀರು ನುಗ್ಗಿ ಜಲಾವೃತಗೊಂಡಿದೆ.
ಕೊಪ್ಪ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಹುಲ್ಲಿನಗದ್ದೆಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ತಾಲೂಕಿನ ಕೊಗ್ರೆ ಗಾಮದಿಂದ ಶೃಂಗೇರಿ ಸಂಪರ್ಕದ ಸೇತುವೆಯೊಂದು ಹಳ್ಳದ ನೀರಿನಿಂದ ಮುಳುಗಡೆಯಾಗಿ ಸಂಪರ್ಕ ಬಂದ್ ಆಗಿದೆ. ತಾಲೂಕಿನ ಹರಿಹರಪುರ ಗ್ರಾಮದ ಬಳಿ ರಸ್ತೆ ಕುಸಿದಿದ್ದು, ಕೊಪ್ಪ-ಶೃಂಗೇರಿ ರಸ್ತೆ ಸಂಪರ್ಕವೂ ಕಡಿತಗೊಂಡಿತ್ತು. ತಾಲೂಕಿನ ಜಯಪುರ ಪಟ್ಟಣದ ಬಳಿ ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಗಳೂರು ಸಂಪರ್ಕದ ಹೆದ್ದಾರಿಯಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ.
ಇನ್ನು ಮೂಡಿಗೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಮಳೆಯ ಅಬ್ಬರ ಮುಂದುವರಿದಿದೆ. ಚಾರ್ಮಾಡಿಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಸಮೀಪ ಸೇರಿದಂತೆ ವಿವಿಧೆಡೆಗಳಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಗುಡ್ಡ ಕುಸಿದ ಸ್ಥಳಗಳಲ್ಲಿ ಏಕಮುಖ ವಾಹನ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಘಾಟಿಯ ಏಳನೇ ತಿರುವಿನಲ್ಲಿ ಮಂಗಳವಾರ ಬೆಳಗ್ಗೆ ರಸ್ತೆಗೆ ಮರ ಬಿದ್ದ ಪರಿಣಾಮ ಹಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಮರಗಳನ್ನು ತರವು ಮಾಡಲು ನೆರವಾದರು. ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ ಹೇಮಾವತಿ ನದಿ ನೀರು ನಾಟಿ ಮಾಡಿದ್ದ ಭತ್ತದ ಗದ್ದೆಗಳಿಗೆ ನುಗ್ಗಿರುವ ಬಗ್ಗೆ ವರದಿಯಾಗಿದೆ.
ತರೀಕೆರೆ ತಾಲೂಕು ಹಾಗೂ ಕಡೂರು ತಾಲೂಕಿನಲ್ಲಿಯೂ ಮಳೆಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆ ಪುನಾರಂಭಗೊಳ್ಳುವ ಸೂಚನೆ ಸಿಕ್ಕಿದೆ. ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮಲೆನಾಡು ಭಾಗದ ನೂರಾರು ಗ್ರಾಮಗಳು ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಮುಳುಗಿವೆ. ಒಟ್ಟಾರೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶಾಲಾ ಕಾಲೇಜುಗಳಿಗೆ ರಜೆ: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಕಸಬಾ, ಅಂಬಳೆ ಹಾಗೂ ಲಕ್ಯಾ ಹೋಬಳಿಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಿಕ್ಕಮಗಳೂರು ತಾಲೂಕಿನಲ್ಲಿಯೂ ಮಂಗಳವಾರ ಉತ್ತಮ ಮಳೆಯಾಗಿದೆ.
ಪ್ರವಾಸಿಗರ ರಕ್ಷಣೆ: ತರೀಕೆರೆ ತಾಲೂಕಿನ ಕಲ್ಹತ್ತಿಗಿರಿ ಜಲಪಾತದ ಬಳಿಯ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಕೆಲವು ಪ್ರವಾಸಿಗರು ತೆರಳಿದ್ದ ಸಮಯದಲ್ಲಿ ಭಾರೀ ಮಳೆಯಿಂದಾಗಿ ಜಲಪಾತದಲ್ಲಿ ನೀರಿನ ಪ್ರಮಾಣ ದಿಢೀರ್ ಹೆಚ್ಚಾದ ಹಿನ್ನೆಲೆ ದೇವಾಲಯದಿಂದ ಹೊರಬರಲು ಸಾಧ್ಯವಾಗದೆ ಕೆಲವು ಪ್ರವಾಸಿಗರು ಸಿಕ್ಕಿಕೊಂಡಿದ್ದರು. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹಗ್ಗದ ಸಹಾಯದಿಂದ ದೇವಾಲಯದಲ್ಲಿ ಸಿಲುಕಿದ್ದ 10ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಿದರು.







.jpg)
.jpg)
.jpg)



