ಮಂಗಳೂರು: ಬ್ಲಡ್ ಹೆಲ್ಪ್ಲೈನ್ ಕರ್ನಾಟಕದ 3ನೇ ವಾರ್ಷಿಕೋತ್ಸವ

ಮಂಗಳೂರು, ಆ.6: ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಮೂರನೇ ವಾರ್ಷಿಕೋತ್ಸವ ಹಾಗೂ ಬ್ಲಡ್ ಡೊನೇಶನ್ ಎಕ್ಸ್ಪೋ 2019 ಇದರ ಉದ್ಘಾಟನೆಯು ನಗರದ ಫಿಝಾ ಮಾಲ್ ರವಿವಾರ ನಡೆಯಿತು.
ಎಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ, ಮಿಲಾಗ್ರಿಸ್ ಚರ್ಚ್ನ ಧರ್ಮಗುರು ಫಾ. ಅನಿಲ್ ಫ್ರಾನ್ಸಿಸ್ ಪಿಂಟೋ, ಪೊಳಲಿ ರಾಮಕೃಷ್ಣ ತಪೋವನದ ವಿವೇಕ್ ಚೈತನ್ಯಾನಂದ ಸ್ವಾಮಿ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡಮಿಯ ಪ್ರಾಧ್ಯಾಪಕ ಅನೀಸ್ ಕೌಸರಿ ‘ಬ್ಲಡ್ ಹೆಲ್ಪ್ಲೈನ್ ಕರ್ನಾಟಕ’ ಇದರ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ವೆನ್ಲಾಕ್ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶರತ್ ಕುಮಾರ್ ರಾವ್ ಜಿ., ತೇಜಸ್ವಿನಿ ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶಿಲ್ಪಪ್ರೇಮ್ ಕುಮಾರ್, ಶ್ರೀನಿವಾಸ್ ಆಸ್ಪತ್ರೆಯ ಡಾ.ಸುಕೇಶ್ ಕೊಟ್ಟಾರಿ, ಕಣಚೂರು ಅಸ್ಪತ್ರೆಯ ರಕ್ತನಿಧಿ ಅಧಿಕಾರಿ ವೆಂಕಟೇಶ್ರಾಜ್ ರೈ, ರೆಡ್ಕ್ರಾಸ್ ಸೊಸೈಟಿಯ ಪ್ರವೀಣ್ ಕುಮಾರ್, ಎ.ಜೆ. ಅಸ್ಪತ್ರೆಯ ಪಿ.ಆರ್. ಗೋಪಾಲಕೃಷ್ಣ ರಕ್ತದಾನ ಕುರಿತು ಮಾಹಿತಿ ನೀಡಿದರು.
ಯೆನೆಪೊಯ ಆಸ್ಪತ್ರೆಯ ಶಿಬಿರ ಸಂಯೋಜಕ ಅಬ್ದುರ್ರಝಾಕ್, ಸಾಮಾಜಿಕ ಕಾರ್ಯಕರ್ತ ಮುನೀರ್ ಬಾವ ಭಾಗವಹಿಸಿದರು. ಈ ಸಂದರ್ಭ ಸಾರ್ವಜನಿಕರಿಗೆ ‘ರಕ್ತ ಮತ್ತು ಆರೋಗ್ಯ’ ಎಂಬ ವಿಷಯದಲ್ಲಿ ತನ್ಸಿಫ್ ಬಿ.ಎಂ. ಕಿಲ್ಲೂರು ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ರಕ್ತದಾನದ ಮಹತ್ವ ಸಾರುವ ನೌಷಾದ್ ಕ್ಲಾಸಿಕ್ ನಿರ್ದೇಶನದ ‘ಬದಲಾವಣೆ ನಮ್ಮಿಂದಲೇ’ ಕಿರುಚಿತ್ರ ಬಿಡುಗಡೆ ಹಾಗೂ ಪ್ರದರ್ಶನ ನಡೆಯಿತು. ವಿಜಯ ಕುಮಾರ್ ಕೊಡಿಯಾಲ್ ಬೈಲ್ ಕಿರುಚಿತ್ರ ಬಿಡುಗಡೆಗೊಳಿಸಿದರು.
ನವರಸ ರಾಜೆ ಭೋಜರಾಜ್ ವಾಮಂಜೂರು, ಕೋಸ್ಟಲ್ ವುಡ್ ನಿರ್ಮಾಪಕ ಕಿಶೋರ್ ಡಿ.ಶೆಟ್ಟಿ, ರಾಜೇಶ್ ಕುಡ್ಲ ಉಪಸ್ಥಿತರಿದ್ದರು. ಬಾಲ ಪ್ರತಿಭೆಗಳಾದ ವಂಶಿ ರತ್ನಕುಮಾರ್, ಮುಹಮ್ಮದ್ ಶಯಾನ್ ವಾಮಂಜೂರು, ಸಾನ್ವಿತ್ ಕುಲಾಲ್ ಮೂಡುಬಿದಿರೆ ಅವರನ್ನು ಸನ್ಮಾನಿಸಲಾಯಿತು.
ವಾರ್ಷಿಕೊತ್ಸವದ ಪ್ರಯುಕ್ತ ಪುಟಾಣಿಗಳಿಗೆ ಕಾರ್ಯಗಾರ, ಚಿತ್ರಕಲಾ ಸ್ಪರ್ಧೆ, ಸಾರ್ವಜನಿಕರಿಗೆ ರಕ್ತದಾನದ ಬಗ್ಗೆ ಮಾಹಿತಿ ನೀಡಲಾಯಿತು. ಶಿಬಿರದಲ್ಲಿ 35 ಯುನಿಟ್ ರಕ್ತ ಸಂಗ್ರಹಿಸಲಾಯಿತು.







