ಭಾರೀ ಮಳೆಗೆ ತೊಕ್ಕೊಟ್ಟು ಜಲಾವೃತ: ಹೊಟೇಲ್, ಅಂಗಡಿಗಳಿಗೆ ನುಗ್ಗಿದ ನೀರು

ಉಳ್ಳಾಲ: ಸೋಮವಾರ ಆರಂಭಗೊಂಡ ಭಾರೀ ಗಾಳಿ ಮಳೆಗೆ ತೊಕ್ಕೊಟ್ಟು ಹಾಗೂ ಉಳ್ಳಾಲ ಜಂಕ್ಷನ್ನಿನಲ್ಲಿರುವ ಅಂಗಡಿ, ಹೊಟೇಲುಗಳಿಗೆ ನೀರು ನುಗ್ಗಿ , ರಸ್ತೆಯಲ್ಲೂ ನೀರು ತುಂಬಿ ಜನಸಂಚಾರ ಅಸ್ತವ್ಯಸ್ತಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆಯಿತು. ಕೆಲವು ಕಡೆಗಳಲ್ಲಿ ರಸ್ತೆ ಹಾನಿ, ಸಿಡಿಲಿನಿಂದ ಹಾನಿಯಾಗಿರುವ ಕುರಿತು ವರದಿಯಾಗಿದೆ.
ಉಳ್ಳಾಲ ನಗರಸಭೆ ವ್ಯಾಪ್ತಿಯ ಧರ್ಮನಗರ ಸಮೀಪ ಭವಾನಿಶಂಕರ್ ಎಂಬವರ ಮನೆಗೆ ಸೋಮವಾರ ತಡರಾತ್ರಿ ಸಿಡಿಲು ಬಡಿದ ಪರಿಣಾಮ ಮನೆಯ ಮೆಟ್ಟಿಲು, ನೆಲ ಮತ್ತು ಗೋಡೆ ಬಿರುಕು ಬಿಟ್ಟಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಘಟನೆ ವೇಳೆ ಮನೆಯೊಳಗಡೆ ಮನೆಮಂದಿಯಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯೊಳಗಿನ ಬಹುತೇಕ ವಿದ್ಯುತ್ ಉಪಕರಣಗಳು ಸುಟ್ಟುಹೋಗಿದ್ದು, ಸುಮಾರು ಎರಡು ಲಕ್ಷದಷ್ಟು ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ. ಉಳ್ಳಾಲ ಜಂಕ್ಷನ್ನಿನಲ್ಲಿರುವ ಅಂಗಡಿ-ಹೊಟೇಲುಗಳು ಜಲಾವೃತಗೊಂಡಿದೆ. ಎಸ್.ಕೆ ಕ್ಯಾಂಟೀನ್, ಪ್ಯಾರೀಸ್ ಹೊಟೇಲ್ ಸಹಿತ ಅಂಗಡಿ ಮುಂಗಟ್ಟುಗಳ ಒಳಕ್ಕೆ ನೀರು ನುಗ್ಗಿದೆ.
ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಚರಂಡಿ ತುಂಬಿ, ಫ್ಲೈಓವರ್ ನಿಂದ ಕೆಳಗೆ ಹರಿದ ನೀರಿನಿಂದಾಗಿ ಜಂಕ್ಷನ್ನಿನಲ್ಲಿರುವ ವೃಂದಾವನ ಹೊಟೇಲ್, ಬೇಕರಿ, ಬಟ್ಟೆ ಅಂಗಡಿ, ಫ್ಯಾನ್ಸಿ ಅಂಗಡಿ , ಟೈಲರ್ ಅಂಗಡಿಗಳಿಗೆ ನೀರು ನುಗ್ಗಿತು. ಹೊಟೇಲಿನ ಒಳಗೆ ನೀರು ತುಂಬಿ ಗ್ರಾಹಕರು ಅದರ ಮೇಲೆಯೇ ಕುಳಿತು ಆಹಾರ ಸೇವಿಸುತ್ತಿರುವ ದೃಶ್ಯದ ಮೊಬೈಲ್ ವೀಡಿಯೋ ವೈರಲ್ ಆಗಿತ್ತು. ರಸ್ತೆಯಲ್ಲಿಯೂ ನೀರು ತುಂಬಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಬಂತು. ಘಟನಾ ಸ್ಥಳಕ್ಕೆ ಶಾಸಕ ಯು.ಟಿ.ಖಾದರ್, ಉಳ್ಳಾಲ ಗ್ರಾಮಕರಣಿಕ ಕೆ. ಪ್ರಮೋದ್ ಕುಮಾರ್, ನಗರಸಭೆ ಸದಸ್ಯೆ ಭಾರತಿ ಭೇಟಿ ನೀಡಿದರು.
ಸಂಪರ್ಕ ಕಡಿತ ಭೀತಿ : ಸೋಮೇಶ್ವರ ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದೆ. ಪರಿಣಾಮ ಉಚ್ಚಿಲ ಬಟ್ಟಪ್ಪಾಡಿಯಲ್ಲಿರುವ ಮೋಹನ್ ಎಂಬವರ ಮನೆಗೆ ಅಲೆಗಳು ಬಡಿಯಲು ಆರಂಭಿಸಿದೆ. ಇದರಿಂದಾಗಿ ಅಡುಗೆ ಕೋಣೆಯ ಗೋಡೆಗಳು ಸಮುದ್ರಪಾಲಾಗಲು ಹೆಜ್ಜೆ ಇಟ್ಟಿವೆ. ತಹಶೀಲ್ದಾರ್ ಗುರುಪ್ರಸಾದ್ ಅವರ ಸೂಚನೆಯಂತೆ ಮೋಹನ್ ಮತ್ತು ಕುಟುಂಬದವರನ್ನು ಸ್ಥಳಾಂತರಕ್ಕೆ ಆದೇಶಿಸಲಾಗಿದೆ.
ಇಂದು ಮಳೆ ಮುಂದುವರಿದಲ್ಲಿ ಮನೆ ಸಂಪೂರ್ಣ ಸಮುದ್ರಪಾಲಾಗುವ ಭೀತಿಯಲ್ಲಿ ಮನೆಮಂದಿ ಇದ್ದಾರೆ. ಜೊತೆಗೆ ಉಚ್ಚಿಲ -ಬಟ್ಟಪ್ಪಾಡಿ-ಫಿಶರೀಸ್ ರಸ್ತೆ ಅರ್ಧದಷ್ಟು ಹಾನಿಯಾಗಿದೆ. ಸದ್ಯ ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರದೇಶದಲ್ಲಿ 10ಕ್ಕೂ ಅಧಿಕ ಮನೆಗಳಿವೆ. ರಸ್ತೆ ಸಂಪೂರ್ಣ ಸಮುದ್ರಪಾಲಾದಲ್ಲಿ ಉಚ್ಚಿಲ ಎಂಡ್ ಪಾಯಿಂಟ್ ಗೆ ಸಂಪರ್ಕ ಕಡಿತವಾಗಲಿದೆ. ಈ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಕಲ್ಲಾಪು ಸೇವಂತಿಗುಡ್ಡೆಗೆ ತೆರಳುವ ಪೆಟ್ರೋಲ್ ಪಂಪ್ನ ಹಿಂಬದಿ ರಸ್ತೆಯಲ್ಲಿ ನೀರು ಹರಿದ ಪರಿಣಾಮ ಕೃತಕ ನೆರೆ ನಿರ್ಮಾಣವಾಗಿತ್ತು.
ಸ್ಥಳಕ್ಕೆ ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ, ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಾ.ಪಂ ಸದಸ್ಯ ರವಿಶಂಕರ್, ಗ್ರಾಮಕರಣಿಕ ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಲಪಾಡಿಯಲ್ಲಿ ಭಾರೀ ಹಾನಿ :
ತಲಪಾಡಿ ಗ್ರಾ.ಪಂ.ನ ಪಿಲಿಕೂರು ಹೊಸನಗರ ಅಬ್ದುಲ್ ರಹಿಮಾನ್ ಎಂಬವರ ಮನೆ ಕಂಪೌಂಡ್ ಗೋಡೆ ಕುಸಿದ ಕಾರಣದಿಂದ ಚರಂಡಿ ಮುಚ್ಚಿ ಹೋಗಿ, ನೆರೆಮನೆಯ ಶೀನ ಪೂಜಾರಿ ಎಂಬವರ ತೋಟಕ್ಕೆ ನೀರು ಹರಿದು ಕೃಷಿ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ದೇವಿನಗರದಿಂದ ದೇವಿಪುರ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಕುಸಿದ ಹಿನ್ನೆಲೆಯಲ್ಲಿ ಈ ಭಾಗದ ಜನ ಸಂಪರ್ಕ ಕಡಿತಗೊಂಡಿದೆ. ಕೇರಳದ ತೂಮಿನಾಡು ಮತ್ತು ಕಿನ್ಯಾ ಮೂಲಕ ಪರ್ಯಾಯ ರಸ್ತೆಯ ಮೂಲಕ ತೆರಳುವಂತಾಗಿದೆ. ರಸ್ತೆಮಧ್ಯೆ ಇರುವ ಸೇತುವೆಯಲ್ಲಿ ನೀರು ತುಂಬಿ ರಸ್ತೆ ಮೇಲಿನಿಂದ ಹರಿದ ಪರಿಣಾಮ ರಸ್ತೆ ಕುಸಿತಗೊಂಡಿದೆ. ದೇವಿಪುರ ದೇವಸ್ಥಾನ ಬಳಿಯ ರಸ್ತೆ ಗೋಡೆ ಕುಸಿತಗೊಂಡು, ರಸ್ತೆ ಅಪಾಯದಂಚಿನಲ್ಲಿದೆ. ಪೂಮಣ್ಣು ಎಂಬಲ್ಲಿ ನಾರಾಯಣ ಎಂಬವರ ಮನೆಗೆ ನೀರು ನುಗ್ಗಿ ಮನೆ ಜಲಾವೃತಗೊಂಡಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ, ಪಿಡಿಓ ಕೇಶವ, ಪಂ. ಸದಸ್ಯರಾದ ಚಂದ್ರಹಾಸ್, ಕೆ.ಅಬ್ದುಲ್ ಖಾದರ್, ಹಾಗೂ ಪಂ. ಸಿಬ್ಬಂದಿ ರೂಪೇಶ್ ಭೇಟಿ ನೀಡಿದ್ದಾರೆ.
ಮುನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಮರ ಉರುಳಿ ಬಿದ್ದು ಅಪಾರ ನಷ್ಟ ಸಂಭವಿಸಿದೆ.










