ಮಾತೃಹೃದಯಿ ನಾಯಕಿಗೆ ಇಂದು ಭಾವಪೂರ್ಣ ವಿದಾಯ

ಹೊಸದಿಲ್ಲಿ, ಆ.7: ವಿದೇಶಾಂಗ ಖಾತೆ ಮಾಜಿ ಸಚಿವೆ ಮತ್ತು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ಬುಧವಾರ ಮೂರು ಗಂಟೆಗಳ ಕಾಲ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇರಿಸಿ, ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಅಂತಿಮ ಗೌರವ ಸಲ್ಲಿಸಬಹುದಾಗಿದೆ. ಆ ಬಳಿಕ ಲೋಧಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ವಿಧಿಗಳು ನೆರವೇರಲಿವೆ ಎಂದು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಮಂಗಳವಾರ ರಾತ್ರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಆರೋಗ್ಯ ಸಚಿವ ಹರ್ಷವರ್ಧನ್, ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್, ಎಚ್ಆರ್ಡಿ ಖಾತೆ ಸಚಿವ ರಮೇಶ್ ಪೊಕ್ರಿಯಾಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಅನೇಕ ಗಣ್ಯರು ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬಳಿಕ ಮೃತದೇಹವನ್ನು ಸುಷ್ಮಾ ಅವರ ದಿಲ್ಲಿ ನಿವಾಸಕ್ಕೆ ಕೊಂಡೊಯ್ಯಲಾಯಿತು.
"ಸುಷ್ಮಾ ಸಾವು ಪಕ್ಷ ಹಾಗೂ ದೇಶಕ್ಕೆ ತುಂಬಲಾರದ ನಷ್ಟ. ಆ ಸ್ಥಾನವನ್ನು ಯಾರೂ ತುಂಬಲಾರರು" ಎಂದು ನಡ್ಡಾ ಕಂಬನಿ ಮಿಡಿದಿದ್ದಾರೆ.