ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ
![ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ ಹೇಮಾವತಿ ಜಲಾಶಯದಿಂದ ನೀರು ಬಿಡುಗಡೆ](https://www.varthabharati.in/sites/default/files/images/articles/2019/08/7/204211-1565179911.jpg)
ಬೆಂಗಳೂರು, ಆ. 7: ಹೇಮಾವತಿ ಜಲಾಶಯದಿಂದ ಹೇಮಾವತಿ ಕಾಲುವೆ ಜಾಲಕ್ಕೆ ಆ.7ರಿಂದ 14.53 ಟಿಎಂಸಿ ನೀರು ಬಿಡಲು ಸರಕಾರ ಅನುಮತಿ ನೀಡಿದೆ.
ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯುಸೆಕ್ಸ್ ಆಗಿದ್ದು, ಹೊರ ಹರಿವು 5 ಸಾವಿರ ಕ್ಯುಸೆಕ್ಸ್ಗಳಷ್ಟಿದೆ. ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಹೊರ ಹರಿವನ್ನು ನಿರೀಕ್ಷಿಸಲಾಗುತ್ತಿದೆ. ಹೇಮಾವತಿ ಜಲಾಶಯದಲ್ಲಿ ಹೆಚ್ಚಿನ ನೀರಿನ ಸಂಗ್ರಹವಿಲ್ಲದ ಕಾರಣ ಕೆರೆಗಳು ಮತ್ತು ಅಣೆಕಟ್ಟುಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಪೂರೈಕೆಯ ಉದ್ದೇಶಕ್ಕೆ ಮಾತ್ರ ಲಭ್ಯ ನೀರನ್ನು ಬಳಸಲು ಹಾಗೂ ನೀರಾವರಿ ಉದ್ದೇಶಗಳಿಗೆ ನೀರು ಒದಗಿಸದೆ ಇರಲು ಉದ್ದೇಶಿಸಲಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದರೊಂದಿಗೆ ಹೇಮಾವತಿ ಜಲಾಶಯದಿಂದ ಕಾಲುವೆ ಜಾಲಕ್ಕೆ ಮುಂದಿನ 25 ದಿನಗಳಿಗೆ 14.53 ಟಿಎಂಸಿ ನೀರು ಹರಿಸಿ, ಯೋಜನೆಯ ವ್ಯಾಪ್ತಿಗೆ ಬರುವ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಸರಕಾರ ಅನುಮತಿ ನೀಡಿದೆ.