ಡಕಾಯಿತಿಯಲ್ಲಿ ದಾಖಲೆಗಳನ್ನು ಕಳೆದುಕೊಂಡಿದ್ದೇವೆ: ರಾಮಜನ್ಮಭೂಮಿ ಕುರಿತಂತೆ ಸುಪ್ರೀಂ ಕೋರ್ಟಿಗೆ ಹೇಳಿದ ನಿರ್ಮೋಹಿ ಅಖಾಡ

ಹೊಸದಿಲ್ಲಿ : ಅಯ್ಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ನಡೆದ ಎರಡನೇ ದಿನದ ವಿಚಾರಣೆಯಲ್ಲಿ ಫಿರ್ಯಾದುದಾರರಲ್ಲಿ ಒಬ್ಬರಾಗಿರುವ ನಿರ್ಮೋಹಿ ಅಖಾಡಾ ಇದರ ವಕೀಲರು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿ ಅಖಾಡಾದ ಬಳಿ ರಾಮಜನ್ಮಭೂಮಿಯ ಮಾಲಕತ್ವ ಕುರಿತಾದ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ.
“ರಾಮಜನ್ಮಭೂಮಿಯನ್ನು ನೀವು ಹೊಂದಿದ್ದ ಕುರಿತಂತೆ ಅದನ್ನು ವಶಪಡಿಸಿಕೊಳ್ಳಲಾದ ಮುಂಚಿನ ಅವಧಿಯ ಮೌಖಿಕ ಯಾ ಲಿಖಿತ ದಾಖಲೆಗಳ ಸಾಕ್ಷ್ಯ, ಕಂದಾಯ ದಾಖಲೆಗಳು ನಿಮ್ಮಲ್ಲಿವೆಯೇ?'' ಎಂದು ಸುಪ್ರೀಂ ಕೋರ್ಟ್ ಪೀಠ ಕೇಳಿದಾಗ ಆಖಾಡಾದ ವಕೀಲರು ಮೇಲಿನಂತೆ ಉತ್ತರಿಸಿದ್ದಾರೆ.
“1982ರಲ್ಲಿ ಡಕಾಯಿತಿಯೊಂದು ನಡೆದಿತ್ತು, ಆಗ ನಾವು ದಾಖಲೆಗಳನ್ನು ಕಳೆದುಕೊಂಡೆವು,'' ಎಂದು ಪಂಚ ಸದಸ್ಯರ ಪೀಠದ ಮುಂದೆ ಅಖಾಡಾದ ವಕೀಲರು ಹೇಳಿದರು.
ಸುಪ್ರೀಂ ಕೋರ್ಟಿನ ಈ ಹಿಂದಿನ ಆದೇಶದಂತೆ ಸಂಧಾನ ಪ್ರಕ್ರಿಯೆ ನಡೆದರೂ ಅದು ವಿಫಲವಾದ ನಂತರ ಆಗಸ್ಟ್ 6ರಿಂದ ಆರಂಭಗೊಂಡು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ಸದಸ್ಯರ ಪೀಠ ಪ್ರತಿ ದಿನ ವಿಚಾರಣೆ ನಡೆಸುತ್ತಿದೆ.