ಒಳಚರಂಡಿಗೆ ಮಳೆನೀರು ಹರಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಮನಪಾ
ಮಂಗಳೂರು, ಆ.7: ನಗರದಲ್ಲಿ ಮಳೆಯ ನೀರನ್ನು ಒಳಚರಂಡಿಗೆ ಜೋಡಣೆ ಮಾಡುತ್ತಿರುವುದು ಮಂಗಳೂರು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮಳೆನೀರನ್ನು ಡ್ರೈನೇಜ್ಗೆ ಸಂಪರ್ಕ ಕಲ್ಪಿಸಬಾರದು. ಇದು ಪಾಲಿಕೆಯ ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಕೆ ನೀಡಿದೆ.
ನಗರದ ರಸ್ತೆಗಳಲ್ಲಿ ಹಾಕಲಾಗಿರುವ ಆಳುಗುಂಡಿಗಳಿಂದ ತ್ಯಾಜ್ಯ ನೀರು ಮಳೆಯ ಸಂದರ್ಭದಲ್ಲಿ ಉಕ್ಕಿ ಹರಿದು ರಸ್ತೆಯಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೆ ನುಗ್ಗುತ್ತಿದೆ. ಒಳಚರಂಡಿ ಸಂಸ್ಕರಣಾ ಘಟಕಗಳಿಗೂ ವಿನ್ಯಾಸಗೊಳಿಸಿದ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ತ್ಯಾಜ್ಯ ನೀರು ಹರಿದು ಬರುತ್ತಿದೆ. ಇದರಿಂದ ಸಂಸ್ಕರಣಾ ಘಟಕಗಳಲ್ಲಿ ತೀವ್ರ ತೊಂದರೆ ಉಂಟಾಗುತ್ತಿದೆ.
ನಾಗರಿಕರು ತಮ್ಮ ಮನೆಯ ತ್ಯಾಜ್ಯನೀರನ್ನು ಮಾತ್ರ ಆಳುಗುಂಡಿಗೆ ಸಂಪರ್ಕಿಸಿ, ಮಳೆಯ ನೀರನ್ನು ಆಳುಗುಂಡಿ ಜೋಡಣೆಯಿಂದ ಕಟ್ಟಾಯಿಸಿ ಮಳೆನೀರು ಹರಿಯುವ ಚರಂಡಿಯಲ್ಲಿ ಹರಿಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತಹ ಜೋಡಣೆಯನ್ನು ದಿನದಿಂದ ಏಳು ದಿನಗಳ ಒಳಗಾಗಿ ಕಟ್ಟಾಯಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.





