ಪಾಕಿಸ್ತಾನದಿಂದ ಭಾರತೀಯ ರಾಯಭಾರಿಯ ಉಚ್ಚಾಟನೆ, ದ್ವಿಪಕ್ಷೀಯ ವ್ಯಾಪಾರ ಅಮಾನತು

ಹೊಸದಿಲ್ಲಿ, ಆ.7: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ವಿಧಿ 370ರ ರದ್ದತಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರಾಜ್ಯದ ವಿಭಜನೆಯ ಹಿನ್ನೆಲೆಯಲ್ಲಿ ಬುಧವಾರ ದಿಢೀರ್ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನವು ಇಸ್ಲಾಮಾಬಾದ್ನಲ್ಲಿಯ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದೆ ಮತ್ತು ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತುಗೊಳಿಸಿದೆ. ಭಾರತ ಸರಕಾರದ ಕ್ರಮದ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸುವುದಾಗಿಯೂ ಕಾಶ್ಮೀರ ಕುರಿತು ಅಂತರರಾಷ್ಟ್ರೀಯ ಹಸ್ತಕ್ಷೇಪವನ್ನು ಪದೇ ಪದೇ ಕೋರುತ್ತಲೇ ಬಂದಿದ್ದ ಪಾಕಿಸ್ತಾನವು ಹೇಳಿದೆ.
ರಾಷ್ಟ್ರೀಯ ಭದ್ರತಾ ಸಮಿತಿಯೊಂದಿಗೆ ಪ್ರಧಾನಿ ಇಮ್ರಾನ್ ಖಾನ್ ಅವರು ಸಭೆ ನಡೆಸಿದ ಬಳಿಕ ಟ್ವೀಟ್ನಲ್ಲಿ ಪಾಕಿಸ್ತಾನ ಸರಕಾರವು ತಾನು ತೆಗೆದುಕೊಳ್ಳಲು ಉದ್ದೇಶಿಸಿರುವ ಐದು ಕ್ರಮಗಳನ್ನು ಪಟ್ಟಿಮಾಡಿದೆ.
‘1-ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳ ಕಡೆಗಣನೆ. 2-ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಅಮಾನತು. 3-ದ್ವಿಪಕ್ಷೀಯ ವ್ಯವಸ್ಥೆಗಳ ಪುನರ್ಪರಿಶೀಲನೆ. 4-ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಗೆ ಅಹವಾಲು ಸಲ್ಲಿಕೆ. 5-ಧೀರ ಕಾಶ್ಮೀರಿಗಳೊಂದಿಗೆ ಏಕತೆಯೊಂದಿಗೆ ಆ.14ರ ಆಚರಣೆ ’ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಹಿರಿಯ ಸರಕಾರಿ ಅಧಿಕಾರಿಗಳು ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಧಾನಿ ಕಚೇರಿಯ ಹೇಳಿಕೆಯು ತಿಳಿಸಿದೆ. ಕಾಶ್ಮೀರ ಕುರಿತು ಭಾರತ ಸರಕಾರದ ಕ್ರಮವು ಗಂಭೀರ ಪರಿಣಾಮಗಳನ್ನುಂಟು ಮಾಡಲಿದೆ ಎಂದು ಖಾನ್ ಮಂಗಳವಾರ ಎಚ್ಚರಿಸಿದ್ದರು.
ಮಂಗಳವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು,ರಾಜ್ಯದ ವಿಭಜನೆಯಾಗಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಿಗಾಯಿರಿಸಿದೆ ಎಂದು ಸಂಸತ್ತಿನಲ್ಲಿ ಸುಳಿವು ನೀಡಿದ್ದ ಹಿನ್ನೆಲೆಯಲ್ಲಿ ಖಾನ್ ಪಾಕಿಸ್ತಾನ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪ್ರತಿದಾಳಿಯ ಮಾತನ್ನಾಡಿದ್ದರು.
‘ಅವರು (ಭಾರತ) ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಏನನ್ನೋ ಮಾಡುತ್ತಾರೆ. ನಾವು ಪ್ರತಿದಾಳಿ ನಡೆಸುತ್ತೇವೆ.ರಕ್ತದ ಕೊನೆಯ ಹನಿ ಇರುವವರೆಗೂ ನಾವು ಹೋರಾಡುತ್ತೇವೆ ’ಎಂದು ಅವರು ಹೇಳಿದ್ದರು.
ಪಾಕಿಸ್ತಾನದ ನಿಕಟ ಮಿತ್ರ ಚೀನಾ ಕೂಡ ಮಂಗಳವಾರ ಭಾರತ ಸರಕಾರದ ಕ್ರಮವನ್ನು ವಿರೋಧಿಸಿದೆ.
ಚೀನಾದ ವಾದವನು ತಳ್ಳಿಹಾಕಿದ್ದ ವಿದೇಶಾಂಗ ಸಚಿವಾಲಯವು,ಭಾರತವು ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳ ಬಗ್ಗೆ ಮಾತನಾಡುವುದಿಲ್ಲ ಮತ್ತು ಅದು ಇತರ ರಾಷ್ಟ್ರಗಳಿಂದಲೂ ಇದನ್ನೇ ನಿರೀಕ್ಷಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು.