10 ವರ್ಷಗಳಲ್ಲಿ ದಾಖಲೆಯ 154 ಮೀ.ಮೀ. ಮಳೆ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್
![10 ವರ್ಷಗಳಲ್ಲಿ ದಾಖಲೆಯ 154 ಮೀ.ಮೀ. ಮಳೆ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ 10 ವರ್ಷಗಳಲ್ಲಿ ದಾಖಲೆಯ 154 ಮೀ.ಮೀ. ಮಳೆ: ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್](https://www.varthabharati.in/sites/default/files/images/articles/2019/08/8/204386-1565271009.jpg)
ಧಾರವಾಡ, ಆ.8: ಕಳೆದ 10 ವರ್ಷಗಳಲ್ಲಿ ಆಗದಷ್ಟು ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ 154 ಮೀ.ಮೀ. ಮಳೆ ಆಗಿದೆ. ನಿನ್ನೆ ಒಂದೇ ದಿನ ಜಿಲ್ಲೆಯ ಗ್ರಾಮ ಒಂದರಲ್ಲಿ ದಾಖಲೆಯ 121 ಮೀ. ಮೀ. ಮಳೆಯಾಗಿದ್ದು, ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತದಿಂದ ಹಗಲು-ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.
ಗುರುವಾರ ನಗರದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಂದಾಜು ಮಾಡಲಾಗದಷ್ಟು ಪ್ರಮಾಣದಲ್ಲಿ ಮಳೆ, ನೆರೆ ಬರುತ್ತಿದೆ. ಮುಂಜಾಗೃತವಾಗಿ ಸುರಕ್ಷತೆ ದೃಷ್ಟಿಯಿಂದ ಆ.10ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದರು.
ಜನರ ನೆರವಿಗಾಗಿ ಎಲ್ಲ ತಾಲೂಕು, ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ನೋಡಲ್ ಅಧಿಕಾರಿಗಳೊಂದಿಗೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಚಿಕ್ಕ ಚಿಕ್ಕ ತಂಡಗಳನ್ನು ರಚಿಸಿ, ಗಂಭೀರ ಪರಿಸ್ಥಿತಿಗಳನ್ನು ನಿರ್ವಹಿಸಲು ಸನ್ನದ್ದಗೊಳಿಸಲಾಗಿದ್ದು, ಅವರು ರಕ್ಷಣಾ ಕಾರ್ಯದಲ್ಲಿ ಈಗಾಗಲೇ ತೊಡಗಿದ್ದಾರೆ ಎಂದು ಅವರು ಹೇಳಿದರು.
ಕಳೆದ ಮಂಗಳವಾರ ದಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಪರಿಸ್ಥಿತಿ ನಿಭಾಯಿಸಲು ಪ್ರತಿ ತಾಲೂಕಿನ ತಹಶೀಲ್ದಾರರೊಂದಿಗೆ ಜಿಲ್ಲೆಯ ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರು ತಹಶೀಲ್ದಾರರಿಗೆ ನೆರವಾಗುವುದರೊಂದಿಗೆ ಪ್ರತಿ ಗಂಟೆಗೊಮ್ಮೆ ಜಿಲ್ಲಾಡಳಿತಕ್ಕೆ ತಮ್ಮ ತಾಲೂಕಿನ ನೆರೆ ಪರಿಸ್ಥಿತಿ, ಸ್ವತ್ತು ಹಾನಿ ಹಾಗೂ ಸಾರ್ವಜನಿಕರಿಗೆ ಅಗತ್ಯವಿರುವ ಪರಿಹಾರ ಕೇಂದ್ರ, ಸಾರಿಗೆ, ಸುರಕ್ಷತೆ, ಆರೋಗ್ಯ ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದರಿಂದಾಗಿ ತೊಂದರೆಗೀಡಾದ ಸಂತ್ರಸ್ಥರಿಗೆ ತಕ್ಷಣ ಸ್ಪಂದಿಸಲು ಸಹಾಯವಾಗಿದೆ. ವಾಟ್ಸ್ ಆ್ಯಪ್ ಮೂಲಕ ಅವರಿಗೆ ಅಗತ್ಯ ನಿರ್ದೇಶನಗಳನ್ನು ತಕ್ಷಣ ನೀಡುತ್ತಿರುವುದರಿಂದ ಹೆಚ್ಚಿನ ಸಮಸ್ಯೆಗಳು ದೂರವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಹಾಯವಾಣಿ ಸಹಾಯ: ಅಳ್ನಾವರ ತಾಲೂಕು-8050530637, ಜಿಲ್ಲೆಯ ಗ್ರಾಮೀಣ ಭಾಗದವರು 9480230962 ಮತ್ತು ಟೋಲ್ಫ್ರಿ 1077 ಈ ಸಂಖ್ಯೆಗೆ ಹಾಗೂ ಅವಳಿ ನಗರದ ಜನರು ಪಾಲಿಕೆಯಲ್ಲಿ ಸ್ಥಾಪಿಸಿರುವ 0836-2213888, 2213869, 2213886, 2213998 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿ ತಮ್ಮ ತೊಂದರೆ, ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಅಳ್ನಾವರ ಪಟ್ಟಣದ ಉಮಾಭವನದಲ್ಲಿ ಪರಿಹಾರ ಕೇಂದ್ರ ಆರಂಭಿಸಿ ಸುಮಾರು 300 ಜನರಿಗೆ ಊಟ, ಉಪಾಹಾರ, ವಸತಿ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ ನಿನ್ನೆಯಿಂದ ಸರಕಾರಿ ವಿದ್ಯಾರ್ಥಿನಿಲಯದಲ್ಲಿ ಮತ್ತೊಂದು ಪರಿಹಾರ ಕೇಂದ್ರ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ಹಾಗೂ ಅಳ್ನಾವರ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿರುವುದರಿಂದ ಬೆಂಗಳೂರಿನಿಂದ ಆಗಮಿಸಿರುವ ರೈಲುಗಳು ಬೆಳಗಾವಿ ತಲುಪಲು ಸಾಧ್ಯವಾಗುತ್ತಿಲ್ಲ. ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ರೈಲು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿಂತಿದ್ದರಿಂದ ಸುಮಾರು 500 ಜನ ಪ್ರಯಾಣಿಕರಿಗೆ ಸಾರಿಗೆ ಕಲ್ಪಿಸಲು ರೈಲ್ವೆ ಇಲಾಖೆ ಕೋರಿತ್ತು. ಅದರಂತೆ ಸುಮಾರು 50 ಬಸ್ಗಳನ್ನು ಒದಗಿಸಿ, ಬೆಳಗಾವಿ ಹಾಗೂ ಇತರ ಭಾಗಗಳಿಗೆ ಪ್ರಯಾಣಿಕರು ಸುರಕ್ಷಿತವಾಗಿ ತಲುಪಿಸಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೆರೆಯಲ್ಲಿ ಸಿಲುಕಿರುವ ಸಾರ್ವಜನಿಕರ ಆಹಾರ ಪೂರೈಕೆಗೆ ತೊಂದರೆಯಾದರೆ ನಿಭಾಯಿಸಲು ಹೆಲಿಕಾಪ್ಟರ್ ಮೂಲಕ ನೀರು, ಆಹಾರ, ಪೊಟ್ಟಣಗಳನ್ನು ತಲುಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೆಎಂಎಫ್ನಿಂದ ಪರಿಹಾರ ಕೇಂದ್ರದಲ್ಲಿನ ಗರ್ಭಿಣಿಯರಿಗೆ, ಮಕ್ಕಳಿಗೆ, ವಯೋವೃದ್ಧರಿಗೆ ಹಾಗೂ ನೆರೆಪೀಡಿತ ಜನರಿಗೆ ಹಾಲು, ಪೌಷ್ಠಿಕ ಆಹಾರ ಮತ್ತು ಬಿಸ್ಕಿಟ್ಗಳನ್ನು ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗ್ಠೋಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾದಿಕಾರಿ ಡಾ. ಬಿ.ಸಿ.ಸತೀಶ್, ಅಪರ ಜಿಲ್ಲಾಧಿಕಾರಿ ಇಬ್ರಾಹೀಮ್ ಮೈಗೂರ ಮತ್ತು ಪ್ರೊಬೇಷನರಿ ಐಎಎಸ್ ಅಧಿಕಾರಿ ಆಕೃತಿ ಬನ್ಸಾಲ್ ಉಪಸ್ಥಿತರಿದ್ದರು.