ರಾಜತಾಂತ್ರಿಕ ವ್ಯಾಪಾರ ಸಂಬಂಧ ಕಡಿತಗೊಳಿಸುವ ನಿರ್ಧಾರ ಮರುಪರಿಶೀಲಿಸಿ: ಪಾಕ್ಗೆ ಭಾರತ ಸೂಚನೆ

ಹೊಸದಿಲ್ಲಿ, ಆ.8: ಕಾಶ್ಮೀರ ಕುರಿತು ತನ್ನ ನಿರ್ಧಾರದ ಹಿನ್ನೆಲೆಯಲ್ಲಿ ತನ್ನೊಂದಿಗೆ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸುವ ಏಕಪಕ್ಷೀಯ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಭಾರತವು ಗುರುವಾರ ಪಾಕಿಸ್ತಾನಕ್ಕೆ ಸೂಚಿಸಿದೆ. ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೆಯ ಸಂಬಂಧಗಳು ಆತಂಕಕಾರಿ ಸ್ಥಿತಿಯಲ್ಲಿವೆ ಎನ್ನುವುದನ್ನು ವಿಶ್ವಕ್ಕೆ ಸಾರುವುದು ಪಾಕಿಸ್ತಾನದ ಈ ಕ್ರಮದ ಹಿಂದಿನ ಉದ್ದೇಶವಾಗಿರುವುದು ಸ್ಪಷ್ಟವಾಗಿದೆ ಎಂದು ಅದು ಹೇಳಿದೆ.
ಭಾರತದೊಂದಿಗೆ ಸಂಬಂಧಗಳನ್ನು ಕಡಿದುಕೊಳ್ಳಲು ಪಾಕಿಸ್ತಾನವು ಉಲ್ಲೇಖಿಸಿರುವ ಕಾರಣಗಳನ್ನು ವಾಸ್ತವಾಂಶಗಳು ಬೆಂಬಲಿಸುತ್ತಿಲ್ಲ ಎಂದು ಸರಕಾರವು ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಸಂವಿಧಾನದಲ್ಲಿಯ ತಾತ್ಕಾಲಿಕ ಷರತ್ತಿನಿಂದಾಗಿ ಈ ಹಿಂದೆ ಜಮ್ಮು-ಕಾಶ್ಮೀರಕ್ಕೆ ನಿರಾಕರಿಸಲ್ಪಟ್ಟಿದ್ದ ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ಬದ್ಧತೆಯು ಭಾರತ ಸರಕಾರ ಮತ್ತು ಸಂಸತ್ನ ಇತ್ತೀಚಿನ ನಿರ್ಧಾರಗಳ ಹಿಂದಿದೆ. ಈ ನಿರ್ಧಾರಗಳ ಪರಿಣಾಮಗಳು ಲಿಂಗ ಮತ್ತು ಸಾಮಾಜಿಕ-ಆರ್ಥಿಕ ತಾರತಮ್ಯಗಳನ್ನೂ ನಿವಾರಿಸಲಿವೆ. ಜಮ್ಮು-ಕಾಶ್ಮೀರದ ಎಲ್ಲ ಜನರ ಆರ್ಥಿಕ ಚಟುವಟಿಕೆಗಳು ಮತ್ತು ಜೀವನೋಪಾಯಗಳಲ್ಲಿ ಸುಧಾರಣೆಯನ್ನೂ ಈ ನಿರ್ಧಾರಗಳು ತರುವ ನಿರೀಕ್ಷೆಯಿದೆ ಎಂದು ಸರಕಾರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿಯ ಅಸಮಾಧಾನವನ್ನು ನಿವಾರಿಸಲು ಇಂತಹ ಅಭಿವೃದ್ಧಿ ಉಪಕ್ರಮಗಳನ್ನು ಪಾಕಿಸ್ತಾನವು ನಕಾರಾತ್ಮಕ ದೃಷ್ಟಿಯಿಂದ ನೋಡುತ್ತಿರುವುದು ಅಚ್ಚರಿಯನ್ನೇನೂ ಉಂಟು ಮಾಡಿಲ್ಲ,ಅದು ಹಿಂದೆಯೂ ತನ್ನ ಗಡಿಯಾಚೆಯ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳಲು ಇಂತಹ ಭಾವನೆಗಳನ್ನು ಬಳಸಿಕೊಂಡಿದೆ ಎಂದು ಹೇಳಿರುವ ಸರಕಾರವು,ವಿಧಿ 320ಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರಗಳಾಗಿವೆ. ಭಾರತೀಯ ಸಂವಿಧಾನವು ಹಿಂದೆ,ಈಗಲೂ ಮತ್ತು ಮುಂದಕ್ಕೂ ಸದಾ ಸಾರ್ವಭೌಮ ವಿಷಯವಾಗಿದೆ. ಪ್ರದೇಶದಲ್ಲಿ ಆತಂಕಕಾರಿ ಸ್ಥಿತಿಯನ್ನು ಕಲ್ಪಿಸಿ ಅದರಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳಿದೆ.
ಪಾಕಿಸ್ತಾನವು ಬುಧವಾರ ಪ್ರಕಟಿಸಿರುವ ಕ್ರಮಗಳ ಬಗ್ಗೆ ಭಾರತ ಸರಕಾರಕ್ಕೆ ವಿಷಾದವಿದೆ ಮತ್ತು ರಾಜತಾಂತ್ರಿಕ ಸಂವಹನದ ಸಾಮಾನ್ಯ ಮಾರ್ಗಗಳನ್ನು ರಕ್ಷಿಸಿಕೊಳ್ಳಲು ಆ ರಾಷ್ಟ್ರವು ತನ್ನ ನಿರ್ಧಾರವನ್ನು ಪುನರ್ಪರಿಶೀಲಿಸಬೇಕೆಂದು ಆಗ್ರಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.