ಪ್ರವಾಹ ಪರಿಸ್ಥಿತಿ: ಸಂತ್ರಸ್ತರ ನೆರವಿಗೆ ಧಾವಿಸಿದ ಕೆಎಸ್ಸಾರ್ಟಿಸಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ. 8: ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ವಿವಿಧ ಪ್ರದೇಶದಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಧಾವಿಸಿದ್ದು, ಪರಿಹಾರ ಸಾಮಾಗ್ರಿಗಳನ್ನು ಉಚಿತವಾಗಿ ಸಾಗಿಸಲು ಅವಕಾಶ ಕಲ್ಪಿಸಿದೆ.
ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ನೆರೆ ಹಾವಳಿ ಪ್ರದೇಶದಲ್ಲಿ ತುರ್ತು ಕಾರ್ಯಗಳಿಗಾಗಿ ಪ್ರತಿ ಘಟಕದಿಂದ 2 ವಾಹನ, ಇಬ್ಬರು ನಿರ್ವಾಹಕರು ಮತ್ತು ಚಾಲಕರನ್ನು ನಿಯೋಜಿಸುವಂತೆ ಕೆಎಸ್ಸಾರ್ಟಿಸಿ ನಿರ್ದೇಶಿಸಿದೆ.
ಜಿಲ್ಲಾಡಳಿತದಿಂದ ಕೋರಿಕೆ ಬಂದಲ್ಲಿ ತುರ್ತಾಗಿ ವಾಹನ ಕಳುಹಿಸುವುದು, ಮಾರ್ಗಮಧ್ಯೆ ಸಿಲುಕಿಕೊಂಡ ಬಸ್ಗಳಿಂದ ಪ್ರಯಾಣಿಕರನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯುವುದು, ಮುಂಗಡ ಕಾಯ್ದಿರಿಸಿದ ಪ್ರಯಾಣಿಕರು ಅನಿವಾರ್ಯ ಕಾರಣಗಳಿಂದ ಕೊನೆಕ್ಷಣದಲ್ಲಿ ಪ್ರಯಾಣ ರದ್ದು ಮಾಡಬೇಕಾಗಿ ಬಂದಲ್ಲಿ ಪೂರ್ತಿ ಮೊತ್ತ ಮರಳಿಸಲು ಕ್ರಮ ಕೈಗೊಳ್ಳುವಂತೆ ಸಂಸ್ಥೆ ಸೂಚಿಸಿದೆ.
Next Story