ಉಡುಪಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಅಪಾರ ಹಾನಿ
ಉಡುಪಿ, ಆ.8: ಕಳೆದೆರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಾಗೂ ಬೀಸುತ್ತಿರುವ ಗಾಳಿಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ತೋಟದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಪ್ರಕೃತಿ ವಿಕೋಪ ನಿಯಂತ್ರಣ ಕಚೇರಿಗೆ ವರದಿಗಳು ಬಂದಿವೆ.
ಉಡುಪಿ ತಾಲೂಕಿನ 82 ಕುದಿ ಗ್ರಾಮದ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರ ತೋಟದ 500ಕ್ಕೂ ಅಧಿಕ ಅಡಿಕೆ ಮರಗಳು ಗಾಳಿಗೆ ಧರಾಶಾಹಿ ಯಾಗಿದ್ದು, ಇದರಿಂದ ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಹಿರೇಬೆಟ್ಟು ಗ್ರಾಮದ ಗುರುನಂದನ ನಾಯಕ್ ಅವರ ಅಡಿಕೆ ತೋಟ, ಅದೇ ಗ್ರಾಮದ ಯಶೋಧ ಅವರ ಭತ್ತ ನಾಟಿ ಮಾಡಿದ ಗದ್ದೆ, 80 ಬಡಗುಬೆಟ್ಟು ಗ್ರಾಮದ ವೇದಾವತಿ ಇವರ ಭತ್ತ ನಾಟಿ ಮಾಡಿದ ಗದ್ದೆಗೆ ಹಾಗೂ ಹಿರೇಬೆಟ್ಟು ಗ್ರಾಮದ ನಾರಾಯಣ ನಾಯಕರ ಗದ್ದೆಗೆ ತಲಾ 15 ಸಾವಿರ ರೂ.ನಷ್ಟವಾಗಿದೆ.
ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಪ್ಪು ನಾಯ್ಕರ ಅಡಿಕೆ ತೋಟಕ್ಕೆ 25,000ರೂ, ಮಾಧವ ನಾಯ್ಕರ ಅಡಿಕೆ ತೋಟಕ್ಕೆ 20,000ರೂ, ಪಾಂಡುರಂಗ ನಾಯಕರ ಅಡಿಕೆ ತೋಟಕ್ಕೆ 15,000ರೂ., ಈದು ಗ್ರಾಮದ ಜೀವಂಧರ ಕುಮಾರ್ರ ಅಡಿಕೆ ತೋಟಕ್ಕೆ ಒಂದು ಲಕ್ಷ ರೂ., ನಲ್ಲೂರು ಗ್ರಾಮದ ಧರ್ಮರಾಜ ಪೂವಣಿಯವರ ಅಡಿಕೆ ಹಾಗೂ ರಬ್ಬರ್ ತೋಟಕ್ಕೆ 30,000ರೂ. ನಷ್ಟವಾಗಿರುವ ಬಗ್ಗೆ ವರದಿಗಳು ಬಂದಿವೆ.
ಇದೇ ಅವಧಿಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 115ಕ್ಕೂ ಅಧಿಕ ಮನೆಗಳಿಗೆ ಸಂಪೂರ್ಣ ಅಥವಾ ಭಾಗಶ: ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಉಡುಪಿ ತಾಲೂಕಿನಲ್ಲಿ 41, ಕಾಪುವಿನಲ್ಲಿ 20, ಬ್ರಹ್ಮಾವರದಲ್ಲಿ 18, ಕುಂದಾಪುರದಲ್ಲಿ 15, ಬೈಂದೂರಿನಲ್ಲಿ 12 ಹಾಗೂ ಕಾರ್ಕಳದಲ್ಲಿ 10 ಮನೆಗಳಿಗೆ ಭಾಗಶ: ಅಥವಾ ಸಂಪೂರ್ಣ ಹಾನಿಯಾದ ಬಗ್ಗೆ ಮಾಹಿತಿ ಬಂದಿವೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕುಂದಾಪುರ ತಾಲೂಕು ಹೊಂಬಾಡಿ ಮಂಡಾಡಿ ಗ್ರಾಮದ ಶಂಕರ್ ಶೇಟ್ ಅವರ ವಾಸದ ಪಕ್ಕಾ ಮನೆಗೆ 1.50 ಲಕ್ಷ ರೂ., ದೇವಲ್ಕುಂದ ಗ್ರಾಮದ ಹೂವಮ್ಮರ ಮನೆಗೆ 50,000ರೂ., ಉಪ್ಪಿನಕುದ್ರು ಗ್ರಾಮದ ಗೋವಿಂದರ ಮನೆಗೆ 75,000ರೂ, ಗಂಗೊಳ್ಳಿ ಗ್ರಾಮದ ಶಾಂತಿ ಖಾರ್ವಿಯವರ ಕಚ್ಚಾ ಮನೆ ಸಂಪೂರ್ಣ ಹಾನಿಗೊಂಡು ಎರಡು ಲಕ್ಷ ರೂ., ಉಪ್ಪಿನಕುದ್ರು ಗ್ರಾಮದ ಬಚ್ಚಿ ದೇವಾಡಿಗರ ಕಚ್ಚಾ ಮನೆ ಸಂಪೂರ್ಣ ಹಾನಿಗೊಂಡು 2 ಲಕ್ಷ ರೂ. ನಷ್ಟವಾಗಿದೆ.
ಬ್ರಹ್ಮಾವರ ಪೆಜಮಂಗೂರು ಗ್ರಾಮದ ಗಿರಿಜ ಪೂಜಾರ್ತಿ ಮನೆಗೆ 50,000ರೂ., ಉಪ್ಪೂರು ಗ್ರಾಮದ ಮಹಾಬಲ ಮೆಂಡನ್ ಮನೆಗೆ 70,000ರೂ., ಕಾಪು ತಾಲೂಕು ಮಲ್ಲಾರು ಗ್ರಾಮದ ಆನಂದ ಶೇರಿಗಾರರ ಮನೆಗೆ 70,000ರೂ., ಹೆಜಮಾಡಿ ಗ್ರಾಮದ ರುಕ್ಕಯ್ಯ ಮನೆಗೆ 60ಸಾವಿರ, ಗುಲಾಬಿ ಸುವರ್ಣ ಮನೆಗೆ 50 ಸಾವಿರ, ಕಮಲಾಕ್ಷಿಯಮ್ಮ ಮನೆಗೆ 50 ಸಾವಿರ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಾವಿತ್ರಿ ಎಂಬವರ ಮನೆಗೆ ಒಂದು ಲಕ್ಷ ರೂ., ಬಡಾಕೆರೆ ಗ್ರಾಮದ ಫಾತಿಮಾರ ಮನೆಗೆ ಎರಡು ಲಕ್ಷ ರೂ., ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಲಕ್ಷ್ಮೀಬಾಯಿ ಮನೆ ಮೇಲೆ ಮರ ಬಿದ್ದು 50,000ರೂ., ಕುದಿ ಗ್ರಾಮದ ಮಾಲತಿ ಕೊಂಡಾಡಿ ಮನೆಗೆ ಎರಡು ಲಕ್ಷ ರೂ., ಅಂಜಾರು ಗ್ರಾಮದ ಕೃಷ್ಣಪ್ಪ ಪೂಜಾರಿ ಮನೆ ಮೇಲೆ ಮರ ಬಿದ್ದು ಮೂರು ಲಕ್ಷ ರೂ. ಸುಜಾತ ನಾಯಕ್ ಮನೆಗೆ ಎರಡು ಲಕ್ಷ ರೂ. ಹಾಗೂ ಅಂಬಲಪಾಡಿ ಗ್ರಾಮದ ಬೋಜ ಪೂಜಾರಿ ಮನೆಗೆ 80,000ರೂ. ನಷ್ಟ ಸಂಭವಿಸಿದೆ ಎಂದು ಪ್ರಕಟಣೆ ತಿಳಿಸಿದೆ.