ಮಲೆನಾಡಲ್ಲಿ ಮುಂದುವರಿದ ನೆರೆ ಸ್ಥಿತಿ: ಇಬ್ಬರು ಮೃತ್ಯು, 404 ಮನೆಗಳಿಗೆ ಹಾನಿ
►8798 ಹೆಕ್ಟೇರ್ ಕೃಷಿ ಭೂಮಿ ಜಲಾವೃತ ►10 ಜಾನುವಾರುಗಳು ಸಾವು

► ತುಂಗಾ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ
ಶಿವಮೊಗ್ಗ, ಆ. 9: ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ವರ್ಷಧಾರೆಯಿಂದ ತತ್ತರಿಸಿರುವ ಮಲೆನಾಡಿನಲ್ಲಿ, ಶುಕ್ರವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಆದರೆ ಪ್ರವಾಹ ಸ್ಥಿತಿ ಮುಂದುವರಿದಿದೆ. ನದಿ, ಕೆರೆಕಟ್ಟೆ, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದೆ.
ತುಂಗಾ, ಭದ್ರಾ, ಶರಾವತಿ, ಕುಮದ್ವತಿ, ವರದಾ, ದಂಡಾವತಿ ಸೇರಿದಂತೆ ಬಹುತೇಕ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿಲ್ಲ. ಶುಕ್ರವಾರ ಕೂಡ ಅಪಾಯದ ಮಟ್ಟದಲ್ಲಿಯೇ ಹರಿಯುತ್ತಿವೆ. ಇದರಿಂದ ಹಲವು ತಗ್ಗು ಪ್ರದೇಶಗಳಲ್ಲಿ ಜಲಾವೃತ ಸ್ಥಿತಿ ಮುಂದುವರಿದಿದೆ. ಪ್ರವಾಹದ ಕಾರಣದಿಂದ ನದಿಪಾತ್ರದ ಹಲವು ನಿವಾಸಿಗಳಣ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ನದಿ, ಕೆರೆಕಟ್ಟೆಗಳು ಉಕ್ಕಿ ಹರಿಯುತ್ತಿರುವುದರಿಂದ ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ನೂರಾರು ಮನೆ, ವಿದ್ಯುತ್ ಕಂಬ, ಮರಗಳು ಉರುಳಿ ಬಿದ್ದಿವೆ. ಹಲವೆಡೆ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಭಾರೀ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗಿದೆ. ಮಲೆನಾಡು ಭಾಗದ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿದೆ.
ಸತತ ಮೂರನೇ ದಿನವಾದ ಶುಕ್ರವಾರ ಕೂಡ ಜಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನೊಂದೆಡೆ ಹವಮಾನ ಇಲಾಖೆಯು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂಬ ಮುನ್ಸೂಚನೆ ನೀಡಿದೆ. ಸುಮಾರು 40 ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಇದರ ಜೊತೆಗೆ ಮಳೆಯಾಗುವ ಸಾಧ್ಯತೆಯಿದೆ. ಎಚ್ಚರದಿಂದಿರುವಂತೆ ಶಿವಮೊಗ್ಗ ಜಿಲ್ಲಾಡಳಿತಕ್ಕೆ ಸಂದೇಶ ರವಾನಿಸಿದೆ ಎಂದು ತಿಳಿದುಬಂದಿದೆ.
ಭಾರೀ ಹಾನಿ: ಧಾರಾಕಾರ ವರ್ಷಧಾರೆಯಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಆಸ್ತಿಪಾಸ್ತಿಗೆ ಧಕ್ಕೆಯಾಗಿದೆ. ಇಲ್ಲಿಯವರೆಗೂ ಇಬ್ಬರು ವ್ಯಕ್ತಿಗಳು ಹಾಗೂ 10 ಜಾನುವಾರುಗಳು ಮೃತಪಟ್ಟಿವೆ. 404 ಮನೆಗಳಿಗೆ ಹಾನಿಯಾಗಿದೆ. 8798 ಹೆಕ್ಟೇರ್ ಕೃಷಿ-ತೋಟಗಾರಿಕೆ ಭೂಮಿ ಜಲಾವೃತವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 361.44 ಹೆಕ್ಟೇರ್, ಭದ್ರಾವತಿಯಲ್ಲಿ 109 ಹೆಕ್ಟೇರ್, ತೀರ್ಥಹಳ್ಳಿ 430 ಹೆಕ್ಟೇರ್, ಸಾಗರ 2935 ಹೆಕ್ಟೇರ್, ಹೊಸನಗರ 532 ಹೆಕ್ಟೇರ್, ಶಿಕಾರಿಪುರ 237 ಹಾಗೂ ಸೊರಬ ತಾಲೂಕಿನಲ್ಲಿ 4194 ಹೆಕ್ಟೇರ್ ಕೃಷಿ-ತೋಟಗಾರಿಕೆ ಭೂಮಿ ಜಲಾವೃತವಾಗಿದೆ.
ಶಿವಮೊಗ್ಗ ನಗರದಲ್ಲಿ 7 ಗಂಜಿ ಕೇಂದ್ರ ತೆರೆಯಲಾಗಿದ್ದು, 1500 ಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ. ಭದ್ರಾವತಿಯಲ್ಲಿ 1, ತೀರ್ಥಹಳ್ಳಿಯಲ್ಲಿ 1, ಸೊರಬ ತಾಲೂಕಿನಲ್ಲಿ 6 ಗಂಜಿ ಕೇಂದ್ರ ತೆರೆಯಲಾಗಿದೆ. ಒಟ್ಟಾರೆ 2250 ಜನರಿಗೆ ಈ ಕೇಂದ್ರಗಳಿಂದ ನೆರವು ಕಲ್ಪಿಸಲಾಗುತ್ತಿದೆ.
ಸೊರಬ ತಾಲೂಕಿನ ಜಡೆ ಹೋಬಳಿಯ ಹೊಸಕೊಪ್ಪ ಗ್ರಾಮ ಹಾಗೂ ಅಗಸನಹಳ್ಳಿ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಜಾನುವಾರುಗಳನ್ನು ರಕ್ಷಿಸಿ, ಆನವಟ್ಟಿಯ ಗೋ ಶಾಲೆಗೆ ಬಿಡಲಾಗಿದೆ. ಶಿವಮೊಗ್ಗ ನಗರದ ವಿದ್ಯಾನಗರ ಸುತ್ತಮುತ್ತಲಿನ ಬಡಾವಣೆಗಳು ಶುಕ್ರವಾರ ಜಲಾವೃತವಾಗಿದ್ದವು. ಇಲ್ಲಿನ ನೂರಾರು ನಿವಾಸಿಗಳನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದೆ.
ಕಟ್ಟೆಚ್ಚರ: ಜಿಲ್ಲೆಯಲ್ಲಿ ನೆರೆ ಸ್ಥಿತಿ ಮುಂದುವರಿದಿರುವುದರಿಂದ ಜಿಲ್ಲಾಡಳಿತ ವ್ಯಾಪಕ ಕಟ್ಟೆಚ್ಚರ ವಹಿಸಿದೆ. 24*7 ಸಹಾಯವಾಣಿ ಕೇಂದ್ರ ತೆರೆದಿದೆ. ತುರ್ತು ನೆರವಿಗಾಗಿ ಪ್ರತಿ ತಾಲೂಕಿಗೆ 100 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಸಮಸ್ಯೆ ಕಂಡುಬರುವ ಸ್ಥಳಗಳಿಗೆ ಖುದ್ದು ಭೇಟಿಯಿತ್ತು ಸ್ಪಂದಿಸುವಂತೆ ಎಲ್ಲ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ತುಂಗಾ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ!
ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯದಿಂದ ಶುಕ್ರವಾರ ಸಂಜೆಯಿಂದ ಡ್ಯಾಂನ ಎಲ್ಲ 22 ಕ್ರಸ್ಟ್ ಗೇಟ್ಗಳನ್ನು ತೆರೆದು, ಸುಮಾರು 1.04 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದ ಡ್ಯಾಂನ ಒಳಹರಿವು ಹೆಚ್ಚಿದ್ದು, ಡ್ಯಾಂಗೆ ಹರಿದು ಬರುತ್ತಿರುವ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ಒಂದೂವರೆ ತಿಂಗಳ ಹಿಂದೆಯೇ ತುಂಗಾ ಜಲಾಶಯವು ಗರಿಷ್ಠ ಮಟ್ಟವಾದ 588.24 ಅಡಿ ತಲುಪಿತ್ತು.
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು 1,24,849 ಕ್ಯೂಸೆಕ್ ಇದೆ. ಹೊರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಡ್ಯಾಂ ವ್ಯಾಪ್ತಿಯಲ್ಲಿ 142.80 ಮಿ.ಮೀ. ವರ್ಷಧಾರೆಯಾಗಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1803.55 (ಗರಿಷ್ಠ ಮಟ್ಟ: 1819) ಅಡಿಯಿದೆ. ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂಗೆ ನಾಲ್ಕೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಭದ್ರಾ ಡ್ಯಾಂನ ನೀರಿನ ಮಟ್ಟ 164.60 (ಗರಿಷ್ಠ ಮಟ್ಟ : 186) ಅಡಿಯಿದೆ. 53,815 ಕ್ಯೂಸೆಕ್ ಒಳಹರಿವಿದ್ದು, 239 ಕ್ಯೂಸೆಕ್ ಒಳಹರಿವಿದೆ. ಡ್ಯಾಂ ವ್ಯಾಪ್ತಿಯಲ್ಲಿ 70 ಮಿ.ಮೀ. ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಡ್ಯಾಂನಲ್ಲಿ ಸುಮಾರು ಐದೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಮಳೆ ವಿವರ: ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 69 ಮಿ.ಮೀ., ಯಡೂರಿನಲ್ಲಿ 157 ಮಿ.ಮೀ., ಹುಲಿಕಲ್ನಲ್ಲಿ 117 ಮಿ.ಮೀ. ಮಳೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ 101.40 ಮಿ.ಮೀ., 179.20 ಮಿ.ಮೀ., ತೀರ್ಥಹಳ್ಳಿ 67.40 ಮಿ.ಮೀ., ಸಾಗರ 107.40 ಮಿ.ಮೀ., ಶಿಕಾರಿಪುರ 64.80 ಮಿ.ಮೀ., ಸೊರಬ 56 ಮಿ.ಮೀ. ಹಾಗೂ ಹೊಸನಗರ ತಾಲೂಕಿನಲ್ಲಿ 167.80 ವರ್ಷಧಾರೆಯಾಗಿದೆ.
ನದಿಗೆ ಇಳಿಯಬಾರದು: ಎಂಜಿನಿಯರ್ ಬಿ.ಎನ್.ಫಣಿರಾಜ್
ಶುಕ್ರವಾರ ಗಾಜನೂರಿನ ತುಂಗಾ ಜಲಾಶಯದಿಂದ ಎಲ್ಲ ಕ್ರಸ್ಟ್ ಗೇಟ್ಗಳನ್ನು ತೆರೆದು 1.04 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭಾರೀ ಪ್ರಮಾಣದ ನೀರು ಬಿಡುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ. ಹಾಗೆಯೇ ನದಿಗೆ ಇಳಿಯಬಾರದು. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಮುಂದುವರಿದಿರುವುದರಿಂದ, ಡ್ಯಾಂನ ಒಳಹರಿವಿನಲ್ಲಿ ಏರಿಕೆ ಕಂಡುಬರುತ್ತಿದೆ ಎಂದು ತುಂಗಾ ಜಲಾಶಯದ ಅಧೀಕ್ಷಕ ಎಂಜಿನಿಯರ್ ಬಿ.ಎನ್.ಫಣಿರಾಜ್ರವರು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.








.jpg)

