ಎನ್ಎಂಪಿಟಿ ಬಂದರಿನಲ್ಲಿ ಲಂಗರು ಹಾಕಿದ ದೋಣಿಗಳು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಕಂಗಾಲು

ಮಂಗಳೂರು, ಆ. 9: ಸಾಂಪ್ರದಾಯಿಕ ಮೀನುಗಾರಿಕೆಯನ್ವಯ ಆ. 1ರಂದು ಆಳ ಸಮುದ್ರದಲ್ಲಿ ಮೀನುಗಾರಿಕೆ ದೋಣಿಗಳಲ್ಲಿ ತೆರಳಿದ್ದ ಮೀನುಗಾರರು ಸದ್ಯ ಕಂಗಾಲಾಗಿದ್ದಾರೆ. ಒಂದೆಡೆ ಪ್ರಕ್ಷುದ್ಧ ವಾತಾವರಣದ ನಡುವೆ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರಾಣವನ್ನು ಉಳಿಸಿಕೊಳ್ಳುವ ಭರದಲ್ಲಿ ದಡ ಸೇರಿದ್ದರೆ, ಇದೀಗ ಎನ್ಎಂಪಿಟಿಯಿಂದ ದೋಣಿಗಳಿಂದ ಹೊರಬರಲಾರದೆ, ಒದ್ದಾಡುವ ಪರಿಸ್ಥಿತಿ.
ಸದ್ಯ 200ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಮಂಗಳೂರಿನ ನವ ಮಂಗಳೂರು ಬಂದರು (ಎನ್ಎಂಪಿಟಿ) ತೀರದಲ್ಲಿ ಲಂಗರು ಹಾಕಿದ್ದು, ಸಾವಿರಾರು ಸಂಖ್ಯೆಯ ಮೀನುಗಾರರು ದೋಣಿಗಳಲ್ಲಿದ್ದಾರೆ. ಎನ್ಎಂಪಿಟಿಯಲ್ಲಿ ಕಟ್ಟುನಿಟ್ಟಿನ ಭದ್ರತೆಯಿಂದಾಗಿ ಲಂಗರು ಹಾಕಿರುವ ದೋಣಿಗಳ ಮೀನುಗಾರರನ್ನು ಭೇಟಿಯಾಗಲು ಸಾಧ್ಯವಾಗದೆ ಬೋಟುಗಳ ಮಾಲಕರು ಪರದಾಡುವಂತಾಗಿದೆ.
ಎನ್ಎಂಪಿಟಿ ಬಂದರು ಸೇರಿರುವ ದೋಣಿಗಳಲ್ಲಿನ ಮೀನುಗಾರರು ಸುರಕ್ಷಿತರಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾದರೂ, ಮೀನುಗಾರರನ್ನು ಭೇಟಿಯಾಗಬೇಕೆಂದರೆ ಮೀನುಗಾರಿಕಾ ಇಲಾಖೆಯಿಂದ ನೀಡಲಾದ ಪಾಸ್ಗಳೇ ಕಡ್ಡಾಯವೆಂದು ಹೇಳಿ ಒಳ ಹೋಗಲು ಅವಕಾಶ ನೀಡುತ್ತಿಲ್ಲ ಎನ್ನಲಾಗುತ್ತಿದೆ.
‘‘ನಿನ್ನೆಯಿಂದ ಸುಮಾರು 700ಕ್ಕೂ ಅಧಿಕ ದೋಣಿಗಳು ಎನ್ಎಂಪಿಟಿಗೆ ಬಂದಿದ್ದು, 8000ಕ್ಕೂ ಅಧಿಕ ಮೀನುಗಾರರು ಇದ್ದಾರೆ. ನನ್ನ ದೋಣಿಯೂ ಇಂದು ದಡ ಸೇರಿದ್ದು, ಮೀನುಗಾರರನ್ನು ನೋಡಲು ಸಂಜೆ 4.30ಕ್ಕೆ ಆಗಮಿಸಿದ್ದರೂ ಪಾಸ್ ಇಲ್ಲ ಎಂದು ಹೇಳಿ ಒಳಗೆ ಹೋಗಲು ಬಿಡುತ್ತಿಲ್ಲ. ಆಧಾರ್ ಕಾರ್ಡ್, ಮತದಾರರ ಗುರುತು ಪತ್ರ ಇದ್ದರೂ ನಮಗೆ ಅವಕಾಶ ಇಲ್ಲವೆನ್ನಲಾಗುತ್ತಿದೆ. ನಮ್ಮ ಮೀನುಗಾರರು ಕೆಲವರಿಗೆ ಆರೋಗ್ಯತೊಂದರೆ ಆಗಿದೆ. ಅವರನ್ನು ನೋಡಲು ಕೂಡಾ ಬಿಡುತ್ತಿಲ್ಲ’’ ಎಂದು ಮುಹಮ್ಮದ್ ತಾಹಿರ್ ಎಂಬವರು ‘ವಾರ್ತಾಭಾರತಿ’ ಜತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
‘‘ಮೀನುಗಾರಿಕಾ ಇಲಾಖೆಯಿಂದ ಅನುಮತಿ ಪತ್ರವನ್ನು ತರಬೇಕೆಂದು ಹೇಳುತ್ತಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಈ ರೀತಿಯಲ್ಲಿ ಮಾಡಿದರೆ ಹೇಗೆ ? ನಮಲ್ಲಿರುವ ಗುರುತಿನ ಚೀಟಿಯ ಮೂಲಕ ಒಳಗೆ ಬಿಡಬಹುದಲ್ಲವೇ ?’’ ಎಂದವರು ಪ್ರಶ್ನಿಸುತ್ತಾರೆ.
ನಮ್ಮನ್ನು ಕೇಳುವವರೇ ಇಲ್ಲ !
‘‘ಆರು ದಿನಗಳ ಹಿಂದೆ ಮೀನುಗಾರಿಕೆಗಾಗಿ ಕಡಲಿಗಿಳಿದಿದ್ದೆವು. ಮಂಗಳೂರು ಧಕ್ಕೆಯಿಂದ ಕೇರಳ, ಕಣ್ಣೂರು, ಕಾರವಾರ ಆಗಿ ಇದೀಗ ಎನ್ಎಂಪಿಟಿ ಸೇರಿದ್ದೇವೆ. ಕಡಲಿನಲ್ಲಿ ತೂಫಾನ್ ಇರುವ ಕಾರಣ ಮೀನಂತೂ ಹಿಡಿಯಲಾಗಲಿಲ್ಲ. ಪ್ರಕ್ಷುಬ್ಧ ವಾತಾವರಣದಲ್ಲಿ ನಾವು ಸದ್ಯ ಪ್ರಾಣಾಪಾಯದಿಂದ ಪಾರಾಗಿ ಎನ್ಎಂಪಿಟಿ ಸೇರಿದ್ದರೂ, ನಾವು ಹೊರಗೆ ಹೋಗುವಂತಿಲ್ಲ. ಅಥವಾ ನಮ್ಮನ್ನು ನೋಡಲು ಯಾರಿಗೂ ಅವಕಾಶನೂ ಮಾಡುತ್ತಿಲ್ಲ. ಅದು ಹೇಗೋ ಪ್ರಾಣ ಉಳಿಸಿ ಬಂದವರಿಗೆ ಆಘಾತದ ಮೇಲೆ ಆಘಾತವಾದಂತಾಗಿದೆ. ನಮ್ಮನ್ನು ಕೇಳುವವರೇ ಇಲ್ಲ’’ ಎಂದು ಎನ್ಎಂಪಿಟಿ ಬಂದರು ಬಳಿ ಲಂಗರು ಹಾಕಿರುವ ದೋಣಿಯಲ್ಲಿನ ಮೀನುಗಾರರೊಬ್ಬರು ‘ವಾರ್ತಾಭಾರತಿ’ ಜತೆ ಪ್ರತಿಕ್ರಿಯಿಸಿದ್ದಾರೆ.
‘‘ನಮಗೆ ದೋಣಿಯಲ್ಲಿ ಆಹಾರಕ್ಕೆ ತೊಂದರೆ ಇಲ್ಲ. ನಾವು ಮೀನುಗಾರಿಕೆಗೆ ಹೋಗುವ ಸಂದರ್ಭ ಸುಮಾರು 15 ದಿನಗಳಿಗಾಗುವಷ್ಟು ಆಹಾರವನ್ನು ಕೊಡೊಯ್ಯುತ್ತೇವೆ. ನಾವು ಇಂದು ಮಧ್ಯಾಹ್ನ 1 ಗಂಟೆಯ ವೇಳೆಗೆ ಎನ್ಎಂಪಿಟಿ ಬಂದರು ಸೇರಿದ್ದೇವೆ. ನಾನಿರುವ ದೋಣಿಯಲ್ಲಿರುವ ಓರ್ವ ಜ್ವರದಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆಗಾಗಿ ಅಲ್ಲಿನ ಗಾರ್ಡ್ ಬಳಿ ಹೇಳಿದರೂ ಯಾವುದೇ ವ್ಯವಸ್ಥೆ ಆಗಿಲ್ಲ. ಕಡಲಿನಲ್ಲಿ ಪ್ರಾಣವನ್ನೇ ಒತ್ತೆಯಿಟ್ಟು ನಾವು ಮೀನುಗಾರಿಕೆಗೆ ತೆರಳುತ್ತೇವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ನಮ್ಮನ್ನು ಕೇಳುವವರೇ ಇಲ್ಲ’’ ಎಂದು ಇನ್ನೋರ್ವ ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದ ಯಾಂತ್ರೀಕೃತ ಮೀನುಗಾರಿಕೆಯು ಆ. 1ರಂದು ಮತ್ತೆ ಆರಂಭಗೊಂಡಿತ್ತು. ಮೀನುಗಾರರು ಬಲೆ, ಮಂಜುಗೆಡ್ಡೆ, ಆಹಾರ ವಸ್ತು ಸಹಿತ ಪೂರಕ ಪರಿಕಗಳು ಹಾಗೂ ಶುಭ ನಿರೀಕ್ಷೆಯೊಂದಿಗೆ ಕಡಲಿಗಿಳಿದಿದ್ದರು. ಆದರೆ ಪ್ರವಾಹ ಪರಿಸ್ಥಿತಿ ಕಡಲಿನಲ್ಲಿಯೂ ತೂಫಾನ್ ಅಲೆಗಳನ್ನು ಸೃಷ್ಟಿಸಿದ ಪರಿಣಾಮ ಮೀನುಗಾರಿಕೆಯನ್ನು ನಡೆಸದಂತೆ ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ಹಾಗಾಗಿ ಅದಾಗಲೇ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ದೋಣಿ ಸಹಿತವಾಗಿ ಮುಂಜಾಗೃತಾ ಕ್ರಮವಾಗಿ ಎನ್ಎಂಪಿಟಿ ಬಂದರಿನಲ್ಲಿ ಲಂಗರು ಹಾಕಿಸಲಾಗಿದೆ.
ಯಾವುದೇ ತೊಂದರೆ ಆಗಿಲ್ಲ- ಪಾಸ್ ಇದ್ದವರಿಗೆ ಅನುಮತಿ
‘‘ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಡಲಿನಲ್ಲಿ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಕಾರಣ ಮೀನುಗಾರರು ತಮ್ಮ ದೋಣಿಗಳನ್ನು ಸದ್ಯ ಎನ್ಎಂಪಿಟಿ ದಡದಲ್ಲಿ ಲಂಗರು ಹಾಕಿದ್ದಾರೆ. ಮೀನುಗಾರಿಕಾ ಪಾಸ್ಗಳನ್ನು ಹೊಂದಿರುವವರಿಗೆ ಹೊರಗೆ ಹೋಗಲು ಯಾವುದೇ ಸಮಸ್ಯೆ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಪಾಸ್ ಇದ್ದವರಿಗೆ ಎನ್ಎಂಪಿಟಿ ಒಳಗಡೆ ಬಿಡಲಾಗುತ್ತದೆ. ಅಂತಹ ಯಾವುದೇ ಸಮಸ್ಯೆ ಇಲ್ಲ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರನ್ನು ಭೇಟಿಯಾಗಲು ಅವಕಾಶ
ಎನ್ಎಂಪಿಟಿ ಗೇಟ್ ಬಳಿಯಿಂದ ಮೀನುಗಾರರನ್ನು ಭೇಟಿಯಾಗಲು ದೋಣಿ ಮಾಲಕರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಗಮನಕ್ಕೆ ತಂದಾಗ, ‘‘ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದ್ದು, ಮೀನುಗಾರರ ಭೇಟಿಗೆ ಅವಕಾಶ ನೀಡಲು ತಿಳಿಸಲಾಗಿದೆ’’ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.







