ಬಂಟ್ವಾಳದಲ್ಲಿ 58 ಮನೆಗಳು ಜಲಾವೃತ: 300ಕ್ಕೂ ಹೆಚ್ಚು ಮಂದಿ ಅತಂತ್ರ

ಬಂಟ್ವಾಳ, ಆ. 9: ಕಳೆದ 6 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶುಕ್ರವಾರವೂ ನೇತ್ರಾವತಿ ನದಿಯು ಅಪಾಯದ ಮಟ್ಟವನ್ನು ಮೀರಿದ ಪರಿಣಾಮ ಕೃತಕ ನೆರೆಯಿಂದಾಗಿ ತಾಲೂಕಿನಲ್ಲಿ ಒಟ್ಟು 58 ಮನೆಗಳು ಜಲಾವೃತಗೊಂಡಿದ್ದು, ರಾತ್ರಿಯೂ ಮುಂದುವರಿದರೆ ಇನ್ನೂ ಸುಮಾರು 40ರಷ್ಟು ಮನೆಗಳು ಜಲಾವೃತಗೊಳ್ಳುವ ಭೀತಿಯಿದೆ. ಬೆಳ್ತಂಗಡಿ ಸಹಿತ ಘಟ್ಟಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾದ ಪರಿಣಾಮ ತಾಲೂಕಿನ ಕೆಲ ಪ್ರದೇಶ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ನೀರು ತುಂಬಿರುವ ದೃಶ್ಯ ಕಂಡುಬಂತು.
ಎಲ್ಲೆಲ್ಲಿ ಜಲಾವೃತ?:
ಅಜಿಲಮೊಗರು, ಬರಿಮಾರು ಮಸೀದಿಯು ಮುಳುಗಡೆಯಾಗಿದೆ. ನಾವೂರು, ಅಜಿಲಮೊಗರು, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಕಡೇಶಿವಲಾಯ, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ತಲಪಾಡಿ, ಬ್ರಹ್ಮರಕೊಟ್ಲು ಹಾಗೂ ಬರಿಮಾರು-ಬುಡೋಳಿ ಸಂಪರ್ಕ ರಸ್ತೆ ಮೊದಲಾದೆಡೆ ನೀರಿನಿಂದ ಮುಳುಗಡೆಯಾಗಿದೆ. ಹಲವು ಮನೆಗಳು, ತೋಟ, ಕೃಷಿ ಭೂಮಿಗೆ ನೆರೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
300ಕ್ಕೂ ಹೆಚ್ಚು ಮಂದಿ ಅತಂತ್ರ:
ಮುಳುಗಡೆ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪ್ರವಾಸಿ ಮಂದಿರ, ಪಾಣೆಮಂಗಳೂರು ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಕೆಲವರು ಗಂಜಿ ಕೇಂದ್ರದಲ್ಲಿ ಉಳಿದುಕೊಂಡರೆ, ಮತ್ತೆ ಕೆಲ ಸಂತ್ರಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.
ನೇತ್ರಾವತಿಯಲ್ಲಿ ಇನ್ನಷ್ಟು ನೀರು ಏರಿಕೆಯಾದರೆ 41 ಮನೆಗಳು ಮುಳುಗಡೆಯಾಗುವ ಭೀತಿಯಲ್ಲಿದ್ದು, ಈ ಮನೆಯ ಕುಟುಂಬಸ್ಥರು ಕೂಡ ಮನೆ ಖಾಲಿ ಮಾಡಿರುವ ಕುರಿತು ವರದಿಯಾಗಿದೆ.
ಒಳ ರಸ್ತೆ ವಾಹನ ಸಂಚಾರ ಸ್ಥಗಿತ
ಶುಕ್ರವಾರ ದಿನವಿಡಿ ಗಾಳಿ, ಮಳೆ ಸುರಿದಿದ್ದ ಪರಿಣಾಮ ಜನಜೀವನವು ಅಸ್ತವ್ಯಸ್ತಗೊಂಡಿತು. ಬಂಟ್ವಾಳ ಬಡ್ಡಕಟ್ಟೆ ಮೀನು ಮಾರ್ಕೆಟ್, ಬಸ್ ತಂಗುದಾಣ ಪ್ರದೇಶ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪ ಬಳಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಮನೆಯ ಅಂಗಳಕ್ಕೆ ನೀರು ನುಗ್ಗಿದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವು ಸ್ಥಗಿತಗೊಂಡಿತು. ಎಲ್ಲ ವಾಹನಗಳು ಗಾಣದಪಡ್ಪ ಆಗಿ ನೆರೆ ವಿಮೋಚನಾ ರಸ್ತೆಯ ಮೂಲಕ ಬಂಟ್ವಾಳಕ್ಕೆ ಪ್ರವೇಶಿಸುತ್ತಿದೆ.
ಶಾಸಕರಿಂದ ನಾಡದೋಣಿ ಸಂಚಾರ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳದಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಅವಲೋಕಿಸುವುದರ ಜೊತೆಗೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮುಳುಗಡೆ ಪ್ರದೇಶದ ಸಂತ್ರಸ್ಥರನ್ನು ರೆಸ್ಕ್ಯೂ ಮಾಡುವಲ್ಲಿ ಮುತುವರ್ಜಿ ವಹಿಸಿದರು.
ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ನಿವಾಸಿಗಳಾದ ಜಯಪೂಜಾರಿ, ಬಾಲಕೃಷ್ಣ ಪೂಜಾರಿ, ಲಕ್ಷಣ ಪೂಜಾರಿ, ಪೂವಪ್ಪ ಪೂಜಾರಿ ಎಂಬವರ ಮನೆಗಳಿಗೆ ನಾಡದೋಣಿಯ ಮೂಲಕ ತೆರಳಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು, ಸಂತ್ರಸ್ಥರನ್ನು ಭೇಟಿಯಾಗಿ ಇವರನ್ನು ದೋಣಿಯ ಮೂಲಕ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದರು.
ಇಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ದ್ವೀಪದಂತಿರುವ ಪ್ರದೇಶಗಳಿಗೆ ನಾಡದೋಣಿಯ ಮೂಲಕ ಮಾತ್ರ ಸಂಪರ್ಕ ಸಾಧ್ಯವಾಗಿತ್ತು. ಜಲಾವೃತಗೊಂಡ ಅಜಿಲಮೊಗರು ಮಸೀದಿಗೆ ಭೇಟಿ ನೀಡಿ ಅಲ್ಲಿನ ಪ್ರಮುಖರಿಂದ ಮಾಹಿತಿ ಪಡೆದರು. ಅದಲ್ಲದೆ, ಮಾಜಿ ಸಚಿವ ರಮನಾಥ ರೈ ಟವರು ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಂಡರು.
ಅಧಿಕಾರಿಗಳಿಂದ ತುರ್ತು ಸ್ಪಂದನೆ
ಇದೇ ವೇಳೆ ನಾವೂರ ಬೀದಿ ಪರಿಸರದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಕುಡಿಯುವ ನೀರಿಗಾಗಿ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು, ಇದಕ್ಕೆ ಸ್ಪಂದಿಸಿದ ಶಾಸಕ ರಾಜೇಶ್ ನಾಯ್ಕ್ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದರು.
ಸಹಾಯಕ ಕಮಿಷನರ್ ರವಿಚಂದ್ರ ನಾಯಕ್, ತಹಶೀಲ್ದಾರ್ ರಶ್ಮಿ ಎಸ್.ಆರ್ ಮತ್ತವರ ಸಿಬಂದಿಗಳೊಂದಿಗೆ ನೆರೆ ಪೀಡಿತ ಪ್ರದೇಶ ಹಾಗೂ ಹಾನಿಗೊಳಗಾದ ಪ್ರದೇಶದುದ್ದಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಹಶೀಲ್ದಾರ್ ರಶ್ಮಿ ಅವರ ತುರ್ತು ಸ್ಪಂದನೆಗೆ ಕಾರ್ಯ ವೈಖರಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಧ್ವನಿವರ್ದಕ ಮೂಲಕ ಎಚ್ಚರಿಕೆ ಸಂದೇಶ
ನೇತ್ರಾವತಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಬಂಟ್ವಾಳ ನಗರ ಪ್ರದೇಶ ನೆರೆ ನೀರಿನಿಂದ ಅವರಿಸಿರುವುದರಿಂದ ಎಚ್ಚರಿಕೆಯಿಂದ ಇರುವಂತೆ, ಅಪಾಯದಂಚಿನಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪುರಸಭೆ ವತಿಯಿಂದ ಮೈಕ್ ಮೂಲಕ ಸಮಜೆಯ ಹೊತ್ತಿಗೆ ಎಚ್ಚರಿಸಿದೆ.
10.4 ನೇತ್ರಾವತಿ ಮಟ್ಟ
ಶುಕ್ರವಾರವೂ ಬೆಳಿಗ್ಗೆಯೂ ಗಾಳಿ, ಮಳೆ ಮುಂದುವರಿದ ಕಾರಣ ನೇತ್ರಾವತಿ ನೀರಿನ ಮಟ್ಟ ಹೆಚ್ಚಾಗಿದೆ. ಅಪಾಯದ ಮಟ್ಟ 8.5 ಆಗಿದ್ದು, ಇಂದು ಬೆಳಿಗ್ಗೆ 10ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ 8.7 ಮೀಟರ್ ಇತ್ತು. ಮಧ್ಯಾಹ್ನ 9.7 ಮೀ. ಹರಿಯುತ್ತಿದ್ದ, ಇದೀಗ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಹೊತ್ತಿನಲ್ಲಿ 10.6ಮೀ. ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಶಂಭೂರು ಎಎಂಆರ್ನ 26 ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ 8.7 ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ.






.jpg)
.jpg)
.jpg)
.jpg)
.jpg)
.jpg)


