ಸಂಕಷ್ಟದಲ್ಲಿ ಖಾನಾಪೂರ ತಾಲೂಕಿನ ಜನತೆ: 123 ಗ್ರಾಮಗಳು ಪ್ರವಾಹ ಬಾಧಿತ
ಬೆಳಗಾವಿ, ಆ.9: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಖಾನಾಪೂರ ತಾಲೂಕಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಖಾನಾಪೂರ ತಾಲೂಕು ಚಿಕ್ಕದಾದರೂ 123 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ, 236 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಥಣಿ-4351, ರಾಯಬಾಗ-4349, ಹುಕ್ಕೇರಿ-975, ಗೋಕಾಕ-1082, ಕಾಗವಾಡ-4599, ನಿಪ್ಪಾಣಿ-2973, ಮೂಡಲಗಿ-1100, ಬೆಳಗಾವಿ-546, ಬೈಲಹೊಂಗಲ-38, ರಾಮದುರ್ಗ-628, ಸವದತ್ತಿ-631 ಹಾಗೂ ಕಿತ್ತೂರು-27 ಕುಟುಂಬಗಳನ್ನು ಆ.9ರವರೆಗೆ ಸ್ಥಳಾಂತರಿಸಲಾಗಿದೆ.
ಖಾನಾಪೂರ ತಾಲೂಕಿನಲ್ಲಿ ಒಟ್ಟಾರೆ 11 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಕೆಂದ್ರಗಳಲ್ಲಿ 925 ಜನರು ಆಶ್ರಯ ಪಡೆದುಕೊಂಡಿದ್ದಾರೆ. ಅದೇ ರೀತಿ ರಕ್ಷಿಸಲಾದ ಹಾಗೂ ಸ್ಥಳಾಂತರಿಸಲಾದ ಜಾನುವಾರುಗಳ ಪೈಕಿ 195 ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಖಾನಾಪೂರ ತಾಲೂಕಿನಲ್ಲಿ 236 ಕುಟುಂಬಗಳು ಪ್ರವಾಹಕ್ಕೆ ಒಳಗಾಗಿದ್ದು, ಒಟ್ಟು 1093 ಜನರನ್ನು ಸ್ಥಳಾಂತರಿಸಿದ್ದು, ಪರಿಹಾರ ಕೇಂದ್ರಗಳಲ್ಲಿ 925 ಜನರು ಜನರು ಆಶ್ರಯ ಪಡೆದುಕೊಂಡಿದ್ದಾರೆ. ಕಿತ್ತೂರು ನೂತನ ತಾಲ್ಲೂಕು, ಇಲ್ಲಿ 9 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 27 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕಿತ್ತೂರು ತಾಲ್ಲೂಕಿನಲ್ಲಿ ಒಟ್ಟು 9 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, 261 ಜನ ಆಶ್ರಯ ಪಡೆದುಕೊಂಡಿದ್ದಾರೆ.
ಸೇನೆ, ಪೊಲೀಸ್, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಗೃಹರಕ್ಷಕದಳ ಸೇರಿದಂತೆ ಸರಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.