ರಾಜ್ಯದಲ್ಲಿ 80 ತಾಲೂಕುಗಳು ಪ್ರವಾಹಪೀಡಿತ : ಸಿಎಂ ಯಡಿಯೂರಪ್ಪ
![ರಾಜ್ಯದಲ್ಲಿ 80 ತಾಲೂಕುಗಳು ಪ್ರವಾಹಪೀಡಿತ : ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ 80 ತಾಲೂಕುಗಳು ಪ್ರವಾಹಪೀಡಿತ : ಸಿಎಂ ಯಡಿಯೂರಪ್ಪ](https://www.varthabharati.in/sites/default/files/images/articles/2019/08/10/204647-1565424031.jpg)
ಬೆಂಗಳೂರು, ಆ.10: ರಾಜ್ಯದಲ್ಲಿ ಹದಿನಾರು ಜಿಲ್ಲೆಗಳ 80 ತಾಲೂಕುಗಳು ಪ್ರವಾಹಪೀಡಿತವಾಗಿದೆ. ಭಾರಿ ಮಳೆ, ಪ್ರವಾಹ, ಭೂ ಕುಸಿತದಿಂದಾಗಿ ಈವರೆಗೆ 24 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದ ಅವರು 6 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. 12,651 ಮನೆಗಳು ಸಂಪೂರ್ಣ ಹಾನಿಯಾಗಿದೆ, 3 ,22 ,448 ಎಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ಹಾನಿ, ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿ ರಾಜ್ಯದಲ್ಲಿ ಇಂತಹ ದುರಂತ ಸಂಭವಿಸಿದೆ. ಸಂಕಷ್ಟಕ್ಕೆ ಸಿಲುಕಿರುವ 2.35 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 624 ಪರಿಹಾರ ಕೇಂದ್ರ ಗಳ ತೆರೆಯಲಾಗಿದೆ. ಅಲ್ಲಿ 1.57 ಮಂದಿ ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ದಿಲ್ಲಿಯ ಕಾರ್ಯಕ್ರಮ ಮೊಟಕು ಗೊಳಿಸಿ ಉತ್ತರ ಕರ್ನಾಟಕ ಭಾಗ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ ಯಡಿಯೂರಪ್ಪ ಕೇಂದ್ರ ಸರಕಾರ ಸೇನೆಯ ನೆರವು ನೀಡಿದೆ. ವಾಯುಪಡೆಯ 4 ಹೆಲಿಕಾಫ್ಟರ್ ,ಎನ್ ಡಿ ಆರ್ ಏಫ್ ನ 20 ತಂಡಗಳು, ಸೇನೆಯ 5 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ ಎಂದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇನ್ಫೋಸಿಸ್ ವತಿಯಿಂದ 10 ಕೋಟಿ ರೂ., ಹಾಲು ಉತ್ಪಾದಕರ ಒಕ್ಕೂಟ 1 ಕೋಟಿ, ಸರಕಾರಿ ನೌಕರರು 1.5 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಶಾಸಕರ ಅಭಿವೃದ್ಧಿ ನಿಧಿಯಿಂದ 2 ಕೋಟಿ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.