ಕಾಶ್ಮೀರಿ ಯುವತಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹರ್ಯಾಣ ಸಿಎಂ ಮನೋಹರಲಾಲ್ ಖಟ್ಟರ್
ಹೊಸದಿಲ್ಲಿ, ಆ.10: “ಪಕ್ಷದ ಕಾರ್ಯಕರ್ತರು ಇನ್ನು ಗೌರವರ್ಣದ ಕಾಶ್ಮೀರಿ ಯುವತಿಯರನ್ನು ವಿವಾಹವಾಗಬಹುದು'' ಎಂದು 370ನೇ ವಿಧಿ ರದ್ದುಗೊಂಡ ನಂತರ ಬಿಜೆಪಿ ಶಾಸಕರೊಬ್ಬರು ಹೇಳಿ ವಿವಾದಕ್ಕೀಡಾದ ಬೆನ್ನಲ್ಲೇ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರ ಹೇಳಿಕೆ ವಿವಾದಕ್ಕೀಡಾಗಿದೆ.
“ಹುಡುಗಿಯರ ಸಂಖ್ಯೆ ಕಡಿಮೆಯಾಗಿ ಹುಡುಗರ ಸಂಖ್ಯೆ ಹೆಚ್ಚಾದರೆ ನಾವು ಬಿಹಾರದಿಂದ ಸೊಸೆಯಂದಿರನ್ನು ತರಬೇಕಾದೀತೆಂದು ನಮ್ಮ ಸಚಿವ ಧನ್ಕರ್ ಜಿ ಅವರು ಹೇಳುತ್ತಿದ್ದರು. ಆದರೆ ಈಗ ಕಾಶ್ಮೀರ ತೆರೆದಿರುವುದರಿಂದ ನಾವು ಅಲ್ಲಿಂದ ಹುಡುಗಿಯರನ್ನು ತರಬಹುದು ಎಂದು ಜನರು ಹೇಳುತ್ತಿದ್ದಾರೆ. ತಮಾಷೆ ಹಾಗಿರಲಿ, ಉತ್ತಮ ಲಿಂಗಾನುಪಾತವಿದ್ದರೆ ಸಮಾಜದಲ್ಲಿ ಸಮತೋಲನವೂ ಇರುವುದು'' ಎಂದು ಶುಕ್ರವಾರ ಹರ್ಯಾಣಾದ ಫತೇಹ್ ಬಾದ್ ಎಂಬಲ್ಲಿ ರ್ಯಾಲಿಯನ್ನುದ್ದೇಸಿಸಿ ಖಟ್ಟರ್ ಹೇಳಿದ್ದಾರೆ.
ಹರ್ಯಾಣಾದ ಯುವಕರಿಗೆ ರಾಜ್ಯದಲ್ಲಿ ವಧುಗಳು ದೊರೆಯದೇ ಇದ್ದರೆ ತಾವು ಅವರಿಗೆ ಬಿಹಾರದಿಂದ ವಧುಗಳನ್ನು ತರುವುದಾಗಿ ಬಿಜೆಪಿ ನಾಯಕ ಓ ಪಿ ಧನ್ಕರ್ 2014ರಲ್ಲಿ ಹೇಳಿದ್ದರು. ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಮಹಿಳೆಯರು ಪುರುಷರಿಗಿಂತ ಹಿಂದೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕನ ಈ ಹೇಳಿಕೆ ಬಂದಿತ್ತು.