10-15 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಂಪೂರ್ಣ ಶಾಂತಿಯುತ ಸ್ಥಿತಿ ಮರಳಲಿದೆ: ಸಚಿವ ಕಿಷನ್ ರೆಡ್ಡಿ

ಹೈದರಾಬಾದ್, ಆ.10: ಜಮ್ಮು-ಕಾಶ್ಮೀರದ ಕೆಲವು ಸ್ಥಳಗಳಲ್ಲಿ ಸಿಆರ್ಪಿಸಿಯ ಕಲಂ 144ರಡಿ ನಿಷೇಧಾಜ್ಞೆಯನ್ನು ಸಡಿಲಿಸಲಾಗಿದೆ ಎಂದು ಶನಿವಾರ ಇಲ್ಲಿ ತಿಳಿಸಿದ ಕೇಂದ್ರ ಸಹಾಯಕ ಗೃಹ ಸಚಿವ ಜಿ.ಕಿಷನ್ ರೆಡ್ಡಿ ಅವರು, ಮುಂದಿನ 10-15 ದಿನಗಳಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ಶಾಂತಿಯುತವಾಗಿರಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯು ನಿಯಂತ್ರಣದಲ್ಲಿದೆ ಎಂದ ಅವರು,ಪಾಕಿಸ್ತಾನ ಮತ್ತು ಅದರ ನಾಯಕರು ಬೇಜವಾಬ್ದಾರಿಯುತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಸರಕಾರವು ಶಾಂತಿಯನ್ನು ಕಾಯ್ದುಕೊಳ್ಳಲು ಭದ್ರತಾ ಪಡೆಗಳ ನಿಯೋಜನೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಶುಕ್ರವಾರ ಕೆಲವು ಸ್ಥಳಗಳಲ್ಲಿ ನಿಷೇಧಾಜ್ಞೆಯನ್ನು ಸಡಿಲಿಸಲಾಗಿದ್ದು, ಕೆಲವು ಶಿಕ್ಷಣ ಸಂಸ್ಥೆಗಳು ಶನಿವಾರದಿಂದ ಪುನರಾರಂಭಗೊಂಡಿವೆ ಎಂದು ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಿಳಿಸಿದರು.
ಕಾಶ್ಮೀರ ಕಣಿವೆಯಲ್ಲಿ ಸಂವಹನ ಪುನರಾರಂಭ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು,ಹಲವಾರು ಸ್ಥಳಗಳಲ್ಲಿ ಅದನ್ನು ಈಗಾಗಲೇ ಪುನರಾರಂಭಿಸಲಾಗಿದೆ. ಎಲ್ಲವೂ ಹಂತ ಹಂತವಾಗಿ ಸಹಜ ಸ್ಥಿತಿಗೆ ಬರಲಿದೆ. ಪ್ರಮುಖ ನಿರ್ಧಾರ
ವೊಂದನ್ನು ಕೈಗೊಂಡಾಗ ಸಣ್ಣಪುಟ್ಟ ಘಟನೆಗಳೂ ನಡೆಯಬಾರದು ಎಂಬ ದೃಷ್ಟಿಯಿಂದ ಕೇವಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲೀಗ ಒಳ್ಳೆಯ ವಾತಾವರಣವಿದೆ. ಹಿಂದೆ ನಿರಂತರ 30-40 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭಗಳಿದ್ದವು,ಆದರೆ ಈಗ ಅಂತಹ ಪರಿಸ್ಥಿತಿಯಿಲ್ಲ ಎಂದರು.
ವಿಧಿ 370ರ ರದ್ದತಿಯು ಜಮ್ಮು-ಕಾಶ್ಮೀರದಲ್ಲಿನ 2-3 ಕುಟುಂಬಗಳ ಆಡಳಿತಕ್ಕೆ ಅಂತ್ಯ ಹಾಡಿದೆ ಹಾಗೂ ರಾಜ್ಯದ ಜನರು ಮುಖ್ಯವಾಹಿನಿಯನ್ನು ಸೇರಲು ಮತ್ತು ತಾವು ವಂಚಿತರಾಗಿದ್ದ ಹಲವಾರು ಸೌಲಭ್ಯಗಳನ್ನು ಪಡೆಯಲು ಅವಕಾಶವನ್ನು ಒದಗಿಸಿದೆ ಎಂದ ಅವರು ಲೇಹ್,ಲಡಾಖ್ ಮತ್ತು ಕಾರ್ಗಿಲ್ ಪ್ರದೇಶಗಳು ಬೌದ್ಧಧರ್ಮದ ಮಹತ್ವದ ಕೇಂದ್ರಗಳಾಗಿ ರೂಪುಗೊಳ್ಳಲಿವೆ ಎಂದರು.