ಭವಿಷ್ಯ ನಿರಾಶಾದಾಯಕವಾಗಿದೆ: ಕಾಶ್ಮೀರ ಪ್ರವಾಸೋದ್ಯಮ ಕ್ಷೇತ್ರದ ಅಳಲು

ಶ್ರೀನಗರ, ಆ.10: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಠಿಣ ನಿರ್ಬಂಧಗಳು ಜಾರಿಯಲ್ಲಿವೆಯಾದರೂ ದೇಶವಿದೇಶಗಳಲ್ಲಿರುವ ಕಾಶ್ಮೀರಿಗಳು ಬಕ್ರೀದ್ ಗಾಗಿ ತಮ್ಮ ಮನೆಗಳಿಗೆ ಮರಳುತ್ತಿರುವುದರಿಂದ ಶನಿವಾರ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳಿಗೆ ಭಾರೀ ಬೇಡಿಕೆಯಿತ್ತು,ಆದರೆ ಮುಂಬರುವ ದಿನಗಳ ಬಗ್ಗೆ ಆತಂಕ ಟ್ಯಾಕ್ಸಿ ನಿರ್ವಾಹಕರಲ್ಲಿ ಉಳಿದುಕೊಂಡಿದೆ.
ಕಾಶ್ಮೀರದಲ್ಲಿ ಸಹಜತೆ ಮರಳುವವರೆಗೆ ಮತ್ತು ಪ್ರವಾಸಿಗಳ ಪುನರಾಗಮನದವರೆಗೆ ತಮ್ಮ ಉದ್ಯಮವು ಕಷ್ಟಗಳನ್ನು ಅನುಭವಿಸಲಿದೆ ಎನ್ನುವುದು ಟ್ಯಾಕ್ಸಿ ನಿರ್ವಾಹಕರು ಮತ್ತು ಪ್ರವಾಸೋದ್ಯಮದ ಇತರ ಪಾಲುದಾರರ ಕಳವಳವಾಗಿದೆ.
ಕೇಂದ್ರದ ನಿರ್ಧಾರ ಪ್ರಕಟಗೊಳ್ಳುವ ಎರಡು ದಿನಗಳ ಮೊದಲು ಆ.2ರಂದು ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿದ್ದ ಜಮ್ಮು-ಕಾಶ್ಮೀರ ಆಡಳಿತವು,ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಪ್ರವಾಸಿಗಳಿಗೆ ಸೂಚಿಸಿತ್ತು.
ಪ್ರವಾಸೋದ್ಯಮವು ಕಾಶ್ಮೀರದ ಆರ್ಥಿಕತೆಯ ಬೆನ್ನೆಲುಬಾಗಿದ್ದು,ಪ್ರತಿ ಬಾರಿ ತೀವ್ರ ಹಿನ್ನಡೆಯಾದಾಗಲೂ ಮತ್ತೆ ಪುಟಿದೇಳುವ ಮೂಲಕ ಮೂರೂವರೆ ದಶಕಗಳ ಉಗ್ರವಾದದ ಇತಿಹಾಸದಲ್ಲಿಯೂ ತನ್ನ ಅಸ್ತಿತ್ವನ್ನು ಉಳಿಸಿಕೊಂಡಿದೆ.
ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ,ಬಾಲಕೋಟ್ ವಾಯುದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹೆಚ್ಚಿದ ಉದ್ವಿಗ್ನತೆ,ಸಂಸದೀಯ ಚುನಾವಣೆಗಳಿಗಾಗಿ ಭದ್ರತಾ ಪಡೆಗಳ ಸುಗಮ ರವಾನೆಗಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದಾರಿಯಲ್ಲಿ ಭದ್ರತಾ ನಿರ್ಬಂಧಗಳಿಂದಾಗಿ ಈ ವರ್ಷ ಪ್ರವಾಸೋದ್ಯಮದ ಹಂಗಾಮು ತಡವಾಗಿ ಆರಂಭಗೊಂಡಿತ್ತು.
ಪ್ರವಾಸಿಗಳ ಹಂಗಾಮು ಮುಗಿದಿದೆ ಮತ್ತು ನಮಗೆ ಮುಂದಿನ ಭವಿಷ್ಯ ನಿರಾಶಾದಾಯಕವಾಗಿ ಕಾಣುತ್ತಿದೆ. ವಿಧಿ 370ರ ರದ್ದತಿಯ ಹಿನ್ನೆಲೆಯಲ್ಲಿ ಕಣಿವೆಯಲ್ಲಿನ ವಾತಾವರಣವನ್ನು ಪರಿಗಣಿಸಿದರೆ ಮುಂದಿನ ವರ್ಷದ ಮಾರ್ಚ್ ವರೆಗೂ ಪ್ರವಾಸೋದ್ಯಮವು ಚೇತರಿಸಿಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ವಿಮಾನ ನಿಲ್ದಾಣದ ಟ್ಯಾಕ್ಸಿ ನಿರ್ವಾಹಕರ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಲೋನೆ ತಿಳಿಸಿದರು. ಸರಕಾರದ ಕ್ರಮಗಳ ಮುನ್ನ ಉತ್ತಮ ಪ್ರವಾಸಿ ಹಂಗಾಮನ್ನು ತಾವು ನಿರೀಕ್ಷಿಸಿದ್ದೆವು ಎಂದರು.
ಕನಿಷ್ಠ ಸ್ಥಿರ ದೂರವಾಣಿಗಳನ್ನಾದರೂ ಪುನರಾರಂಭಿಸಬೇಕು ಮತ್ತು ಟ್ಯಾಕ್ಸಿ ನಿರ್ವಾಹಕರಿಗೆ ಕರ್ಫ್ಯೂ ಪಾಸ್ಗಳನ್ನು ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ವಿಮಾನ ನಿಲ್ದಾಣದ ಪಾರ್ಕ್ನಲ್ಲಿಯ 200ಕ್ಕೂ ಅಧಿಕ ಟ್ಯಾಕ್ಸಿಗಳ ಪೈಕಿ ಶೇ.85ರಷ್ಟು ಟ್ಯಾಕ್ಸಿಗಳು ಬ್ಯಾಂಕ್ ಸಾಲ ಹೊಂದಿದ್ದು,ಕಂತುಗಳನ್ನು ಮರುಪಾವತಿಲೂ ಸಾಧ್ಯವಾಗುತ್ತಿಲ್ಲ ಎಂದರು.
ಉದ್ಯಮದಲ್ಲಿ ಹಾನಿಯ ಬಗ್ಗೆ ಟ್ಯಾಕ್ಸಿ ನಿರ್ವಾಹಕರು ಮಾತ್ರವಲ್ಲ,ಹೋಟೆಲ್ಗಳ ಮಾಲಿಕರು,ಹೌಸ್ ಬೋಟ್ಗಳ ಮಾಲಿಕರು,ಟೂರ್ ಮತ್ತು ಟ್ರಾವೆಲ್ ಏಜೆಂಟರೂ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.