ಬೈಂದೂರು: ಭಾರೀ ಮಳೆಗೆ ನಂದನವನ ಸರಕಾರಿ ಶಾಲೆ ಕಟ್ಟಡ ಕುಸಿತ
ಬೈಂದೂರು, ಆ. 11: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರ್ಗಾಲ್ ಗ್ರಾಮದ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಾಡು ಸಹಿತ ಗೋಡೆ ಕುಸಿದು ಬಿದ್ದ ಘಟನೆ ರವಿವಾರ ನಡೆದಿದೆ.
ಶತಮಾನ ಪೂರೈಸಿದ ಈ ಶಾಲೆಯ ಒಂದು ಕೊಠಡಿಯ ಮಾಡು ಹಾಗೂ ಗೋಡೆ ಕುಸಿದು ಬಿದ್ದಿದ್ದು, ಅದಕ್ಕೆ ಸಂಬಂಧಿಸಿ ಇರುವ ಇತರ ಎರಡು ಕೊಠಡಿ ಗಳು ಕೂಡ ಮಾಡು ಸಮೇತ ಕುಸಿದು ಬೀಳುವ ಸಾಧ್ಯತೆಗಳು ಇದೆ.
ಒಂದರಿಂದ ಐದನೆ ತರಗತಿವರೆಗೆ ಸುಮಾರು 15 ವಿದ್ಯಾರ್ಥಿಗಳು ಈ ಶಾಲೆ ಯಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾತ್ರಿ ವೇಳೆ ಕುಸಿದ ಪರಿಣಾಮ ಹಾಗೂ ರಜೆ ಇರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಲೆ ಕುಸಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.
ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಬಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ.13ರಿಂದ ಮತ್ತೆ ಶಾಲೆ ಆರಂಭವಾಗಲಿರುವುದರಿಂದ ಇಲ್ಲಿನ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳು ಸ್ಥಳೀಯರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.