ಹರ್ಯಾಣ ವಿಧಾನಸಭಾ ಚುನಾವಣೆ: ಮೈತ್ರಿ ಮಾಡಿಕೊಂಡ ಜೆಜೆಪಿ-ಬಿಎಸ್ಪಿ

ಹೊಸದಿಲ್ಲಿ, ಆ.11: ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಗಾಗಿ ತನ್ನ ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯು ಬಿಎಸ್ಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ದುಷ್ಯಂತ ಚೌತಾಲಾ ಅವರು ರವಿವಾರ ಪ್ರಕಟಿಸಿದರು.
ತನ್ನ ತಂದೆ ಅಜಯ ಚೌತಾಲಾ ಮತ್ತು ಸೋದರ ದಿಗ್ವಿಜಯ ಚೌತಾಲಾರೊಂದಿಗೆ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್ಎಲ್ಡಿ)ದಿಂದ ಉಚ್ಚಾಟಿಸಲ್ಪಟ್ಟ ಬಳಿಕ ದುಷ್ಯಂತ ಕಳೆದ ವರ್ಷದ ಡಿಸೆಂಬರ್ನಲ್ಲಿ ಜೆಜೆಪಿಯನ್ನು ಸ್ಥಾಪಿಸಿದ್ದರು. ಅವರ ಮುತ್ತಾತ ಹಾಗೂ ಮಾಜಿ ಉಪಪ್ರಧಾನಿ ದೇವಿಲಾಲ್ ಅವರು ಲೋಕದಳದ ಸ್ಥಾಪಕರಾಗಿದ್ದು, ಅಜಯ ಚೌತಾಲಾರ ಸೋದರ ಅಭಯ ಚೌತಾಲಾ ಮತ್ತು ಅವರ ಪುತ್ರರಾದ ಕರಣ್ ಚೌತಾಲಾ ಹಾಗೂ ಅರ್ಜುನ ಚೌತಾಲಾ ಅವರು ಈ ಮೂವರನ್ನು ಪಕ್ಷದಿಂದ ಹೊರದಬ್ಬಿದ್ದಾರೆ. ಪಕ್ಷದ ಉತ್ತರಾಧಿಕಾರಕ್ಕಾಗಿ ನಡೆದ ಕಾಳಗದಲ್ಲಿ ಅಜಯ್ ಚೌತಾಲಾರನ್ನು ತಂದೆ ಓಂ ಪ್ರಕಾಶ ಚೌತಾಲಾ ಬೆಂಬಲಿಸಿರಲಿಲ್ಲ.
ಹಾಲಿ ವಿಧಾನಸಭೆಯ ಅಧಿಕಾರವಧಿ ನವೆಂಬರ್ಲ್ಲಿ ಅಂತ್ಯಗೊಳ್ಳಲಿದ್ದು ಅದೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. 2014ರ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ ಎನ್ಡಿಎ 48,ಐಎನ್ಎಲ್ಡಿ 19 ಮತ್ತು ಕಾಂಗ್ರೆಸ್ 15ನ್ನು ಗೆದ್ದಿದ್ದರೆ ಬಿಎಸ್ಪಿ ಒಂದು ಸ್ಥಾನವನ್ನು ಮಾತ್ರ ಪಡೆದಿತ್ತು.