ಲಾಹೋರ್: ಮಹಾರಾಜಾ ರಂಜಿತ್ ಸಿಂಗ್ ಪ್ರತಿಮೆ ಧ್ವಂಸ
ಲಾಹೋರ್, ಆ. 11: 19ನೇ ಶತಮಾನದ ದೊರೆ ಮಹಾರಾಜಾ ರಂಜಿತ್ ಸಿಂಗ್ರ ಲಾಹೋರ್ನಲ್ಲಿರುವ ಪ್ರತಿಮೆಯನ್ನು ಶನಿವಾರ ಇಬ್ಬರು ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
ಮಹಾರಾಜಾ ರಂಜಿತ್ ಸಿಂಗ್ 19ನೇ ಶತಮಾನದ ಮೊದಲಾರ್ಧದಲ್ಲಿ ಸಿಖ್ ಸಾಮ್ರಾಜ್ಯವನ್ನು ಆಳಿದ್ದರು.
ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡ ವ್ಯಕ್ತಿಗಳು ಪ್ರತಿಮೆಯಿರುವ ಲಾಹೋರ್ ಕೋಟೆಯ ಮೈ ಜಿಂದಾ ಹವೇಲಿಯನ್ನು ಪ್ರವೇಶಿಸಿ, ಪ್ರತಿಮೆಯ ಒಂದು ಭಾಗಕ್ಕೆ ಹಾನಿ ಮಾಡಿದರು. ಈ ಅರಮನೆಯಲ್ಲಿ ರಂಜಿತ್ ಸಿಂಗ್ರ ಪತ್ನಿ ಮಹಾರಾಣಿ ಜಿಂದ್ ಕೌರ್ ವಾಸಿಸುತ್ತಿದ್ದರು.
ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದರು.
ಅವರು ಮೌಲಾನಾ ಖಾದಿಮ್ ರಿಝ್ವಿಯ ತೆಹ್ರೀಕ್-ಲಬ್ಬಾಯಿಕ್ ಪಾಕಿಸ್ತಾನ್ ಪಕ್ಷಕ್ಕೆ ಸೇರಿದವರು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಭಾರತದ ನಿರ್ಧಾರದಿಂದ ಅವರು ಕೋಪಗೊಂಡಿದ್ದರು ಎನ್ನಲಾಗಿದೆ.