ಕೊಡಗಿನಲ್ಲಿ ಮಳೆ ಕೊಂಚ ಕ್ಷೀಣ: ಮುಂದುವರಿದ ಪ್ರವಾಹ ಆತಂಕ
![ಕೊಡಗಿನಲ್ಲಿ ಮಳೆ ಕೊಂಚ ಕ್ಷೀಣ: ಮುಂದುವರಿದ ಪ್ರವಾಹ ಆತಂಕ ಕೊಡಗಿನಲ್ಲಿ ಮಳೆ ಕೊಂಚ ಕ್ಷೀಣ: ಮುಂದುವರಿದ ಪ್ರವಾಹ ಆತಂಕ](https://www.varthabharati.in/sites/default/files/images/articles/2019/08/11/204845-1565546616.jpg)
ಮಡಿಕೇರಿ, ಆ.11: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾರದ ಕಾಲ ಸಾಕಷ್ಟು ಉತ್ಪಾತಗಳನ್ನು ಸೃಷ್ಟಿಸಿದ ಮಹಾಮಳೆ, ಭಾನುವಾರದಂದು ಕೊಂಚ ಕ್ಷೀಣವಾಗುವ ಮೂಲಕ ಜೀವನದಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳ ನೀರಿನ ಮಟ್ಟ ಇಳಿಮುಖಗೊಳ್ಳುತ್ತಾ ಸಾಗಿದೆಯಾದರು, ಆತಂಕದ ವಾತಾವರಣ ಮುಂದುವರಿದಿದೆ.
ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಮಳೆಯ ಪ್ರಮಾಣ ಸಾಕಷ್ಟು ಕುಸಿದಿದ್ದು, ಸರಾಸರಿ 4 ಇಂಚು ಮಳೆ ದಾಖಲಾಗಿದೆ. ಇದರಿಂದ ಪ್ರವಾಹದ ಮಟ್ಟ ಇಳಿಮುಖವಾಗಿದ್ದು, ನದಿ ಪಾತ್ರದ ನಾಪೋಕ್ಲು, ಸಿದ್ದಾಪುರ ಭಾಗಗಳಲ್ಲಿನ ನೆರೆ ಕೊಂಚ ಇಳಿಮುಖವಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಪ್ರವಾಹದ ಮಟ್ಟ ಇಳಿದಿದೆಯಾದರು ಇನ್ನೂ ಸಂಚಾರ ಸುಗಮವಾಗಿಲ್ಲ, ಹಲ ಬಡಾವಣೆಗಳು ನೀರಿನಿಂದ ಆವೃತ್ತವಾಗಿದೆ.
ಈ ಬಾರಿ ಮುಂಗಾರಿನ ಮಳೆಯ ಆರ್ಭಟಕ್ಕೆ ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನ ಹಲವು ಗ್ರಾಮಗಳು ನಲುಗಿ ಹೋಗಿದ್ದು, ಸಹಸ್ರಾರು ಏಕರೆ ಕೃಷಿ ಭೂಮಿ ಮುಳುಗಡೆಯಾಗಿ ನೂರಾರು ಮನೆಗಳು ಮುಳುಗಡೆಗೊಂದು ಕಂಡು ಕೇಳರಿಯದ ಅನಾಹುತಗಳು ಸೃಷ್ಟಿಯಾಗಿದೆ. ವಾರದ ನಂತರ ಹವಾಮಾನ ಇಲಾಖೆಯ ‘ರೆಡ್ ಅಲರ್ಟ್’ ಮನ್ಸೂಚನೆಗೆ ತದ್ವಿರುದ್ಧವಾಗಿ ಮಳೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖಗೊಂಡು ಒಂದಷ್ಟು ನೆಮ್ಮದಿಯನ್ನು ಮೂಡಿಸಿದೆ.
ಬರೆ ಕುಸಿತದ ಆತಂಕ-ಮಳೆಯ ಪ್ರಮಾಣ ಇಳಿಮುಖಗೊಳ್ಳುತ್ತಿರುವ ಹಂತದಲ್ಲೆ ಮಡಿಕೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ಬರೆ ಕುಸಿತವಾಗಿದ್ದು, ಮಳೆಯ ಪ್ರಮಾಣ ಹೆಚ್ಚಾದಲ್ಲಿ ಸಂಪರ್ಕ ಕಡಿತಗೊಳ್ಳುವ ಅಪಾಯ ಎದುರಾಗಿದೆ.
ಮಡಿಕೇರಿ ಸಮೀಪದ ಗಾಳಿಬೀಡಿಗೆ ತೆರಳುವ ಹಾದಿಯಲ್ಲಿ ಬರೆ ಕುಸಿತ ಸಂಭವಿಸಿದ್ದು, ಇದನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸುವ ಕಾರ್ಯ ನಡೆದಿದೆ. ತಲಕಾವೇರಿಯ ಕಾರು ಪಾರ್ಕಿಂಗ್ ಬಳಿ ಭೂ ಕುಸಿತ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಹಲ ಬಡಾವಣೆಗಳು ಕಳೆದ ಒಂದು ವಾರದ ಭಾರೀ ಮಳೆಗೆ ಸಿಲುಕಿ ನಲುಗಿದ್ದು, ನೂರಾರು ಮನೆಗಳು ಜಲಾವೃತವಾಗಿ, ಸಾವಿರಾರು ಮಂದಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ಒಂದು ದಿನದ ಅವಧಿಯಲ್ಲಿ ಮಳೆಯ ಪ್ರಮಾಣ ಇಳಿದಿರುವುದರಿಂದ ಕೆಲ ಅಡಿಗಳಷ್ಟು ಪ್ರವಾಹದ ನೀರು ಇಳಿದಿದ್ದರೂ ಬಡಾವಣೆಗಳಿಗೆ ಬೋಟ್ಗಳಲ್ಲೆ ತೆರಳುವ ಪರಿಸ್ಥಿತಿ ಇದೆ.
ಮಡಿಕೇರಿಯಿಂದ ಮೂರ್ನಾಡು ಮಾರ್ಗವಾಗಿ ವೀರಾಜಪೇಟೆಯನ್ನು ಸಂಪರ್ಕಿಸುವ ರಸ್ತೆಯ ಕೊಂಡಂಗೇರಿಯಲ್ಲಿ ಹಿಂದೆಂದೂ ಕಾಣದ ಪ್ರವಾಹವೇರ್ಪಟ್ಟು ಹಲಮನೆಗಳು ಜಲಾವೃತವಾಗಿ ನೂರಾರು ಮಂದಿ ಪರಿಹಾರ ಕೇಂದ್ರಗಳಲ್ಲಿ ನೆಲೆ ನಿಂತಿದ್ದಾರೆ. ಇಲ್ಲಿಯೂ ಮಳೆಯ ಪ್ರಮಾಣ ಕ್ಷೀಣಿಸಿದ್ದರು, ಪ್ರವಾಹ ಅತ್ಯಂತ ನಿಧಾನವಾಗಿ ಇಳಿಮುಖವಾಗುತಿದೆಯಷ್ಟೆ. ಇನ್ನೊಂದು ದಿನ ಮಳೆ ಬಿಡುವು ನೀಡಿದಲ್ಲಿ ರಸ್ತೆಯ ಮೇಲೆ ಹರಿಯುತ್ತಿರುವ ನೀರು ಕೆಳಕ್ಕಿಳಿದು ಸಂಚಾರ ಸುಗಮಗೊಳ್ಳಬಹುದು.
ದಕ್ಷಿಣ ಕೊಡಗಿನ ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಅಮ್ಮತ್ತಿ , ಬಾಳೆಲೆ ವಿಭಾಗಗಳಲ್ಲು ಮಳೆಯ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದೆಯಾದರು, ಪ್ರವಾಹವಿನ್ನೂ ಇಳಿಯಬೇಕಿದೆ. ಹಲವೆಡೆಗಳಲ್ಲಿ ರಸ್ತೆಯ ಮೇಲೆ ಹರಿಯುತ್ತಿದ್ದ ಪ್ರವಾಹದ ನೀರು ಇಳಿದು ಸಂಚಾರ ಸುಗಮವಾಗಿದೆ.
ನೆಮ್ಮದಿಯ ಭಾವ ಮೂಡಿಸಿದ ರವಿಕಿರಣ- ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲೆಯ ಬಹಳಷ್ಟು ಭಾಗಗಳಲ್ಲಿ ಕಳೆದ ಒಂದು ವಾರದ ಬಳಿಕ ಬೆಳಗ್ಗಿನ ಅವಧಿಯಲ್ಲಿ ಬಿಸಿಲು ಮೂಡಿ ನೆಮ್ಮದಿಯ ಭಾವವನ್ನು ಮೂಡಿಸಿತು.