ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ, ಹಣ ಪ್ರಿಂಟು ಮಾಡುವುದೇನೂ ಬೇಡ: ಬಿಎಸ್ವೈಗೆ ಪರಮೇಶ್ವರ್ ತಿರುಗೇಟು
![ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ, ಹಣ ಪ್ರಿಂಟು ಮಾಡುವುದೇನೂ ಬೇಡ: ಬಿಎಸ್ವೈಗೆ ಪರಮೇಶ್ವರ್ ತಿರುಗೇಟು ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ, ಹಣ ಪ್ರಿಂಟು ಮಾಡುವುದೇನೂ ಬೇಡ: ಬಿಎಸ್ವೈಗೆ ಪರಮೇಶ್ವರ್ ತಿರುಗೇಟು](https://www.varthabharati.in/sites/default/files/images/articles/2019/08/14/205124-1565796343.jpg)
ಬೆಂಗಳೂರು, ಆ.14: ಪ್ರವಾಹ ಪರಿಹಾರಕ್ಕೆ ಕೇಳಿದಷ್ಟು ಹಣ ನೀಡಲು ನೋಟು ಪ್ರಿಂಟು ಮಾಡುವ ಮಷಿನ್ ತಮ್ಮ ಬಳಿಯಿಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಟ್ವೀಟರ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಎಲ್ಲ ಪತ್ರಿಕೆಗಳ ಮುಖಪುಟದಲ್ಲೂ ತಮ್ಮ ಭಾವಚಿತ್ರವನ್ನು ದೊಡ್ಡದಾಗಿ ಹಾಕಿಸಲಿಕ್ಕೆ ಇದ್ದ ಎಲ್ಲ ದುಡ್ಡು ಖರ್ಚಾಗಿರಬೇಕು. ಅದಕ್ಕೇ ಪ್ರವಾಹ ಪರಿಹಾರಕ್ಕೆ ಬೇಕಾದಷ್ಟು ಹಣವಿಲ್ಲ, ಪ್ರಿಂಟು ಮಾಡಲು ಸಾಧ್ಯವಿಲ್ಲ ಅಂದಿದ್ದೀರಿ. ಯಡಿಯೂರಪ್ಪನವರೇ ರಾಜ್ಯಕ್ಕೆ ಬೇಕಾದಷ್ಟು ಪರಿಹಾರವನ್ನು ಕೇಂದ್ರದಿಂದ ಪಡೆದುಕೊಳ್ಳಿ, ಹಣ ಪ್ರಿಂಟು ಮಾಡುವುದೇನೂ ಬೇಡ ಎಂದು ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಚುನಾವಣೆ ಸಮಯದಲ್ಲಿ ಮೋದಿಯವರ ಮುಖ ನೋಡಿ ನಮಗೆ ಮತ ಹಾಕಿ ಎಂದು ಜನರನ್ನು ಕೇಳುವುದೇನೂ ಕಷ್ಟದ ಕೆಲಸವಲ್ಲ. ಜನರಿಗೆ ಕಷ್ಟ ಎದುರಾದಾಗ ಅದೇ ಮೋದಿಯವರ ಮುಂದೆ ಹೋಗಿ, ನಿಮ್ಮ ಮುಖ ನೋಡಿ ಜನ ನಮಗೆ ಮತ ಹಾಕಿದ್ದಾರೆ, ಅವರ ಕಷ್ಟದಲ್ಲಿ ಅವರ ನೆರವಿಗೆ ಬನ್ನಿ ಎಂದು ಕೇಳುವುದು ಕಷ್ಟದ ಕೆಲಸ. ರಾಜ್ಯ ಬಿಜೆಪಿ ನಾಯಕರೇ ಇದನ್ನು ಯಾವಾಗ ಮಾಡುತ್ತೀರಿ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ.