ಜೇಟ್ಲಿಗೆ 'ಶ್ರದ್ಧಾಂಜಲಿ' ಸಲ್ಲಿಸಿದ ಗುಜರಾತ್ ನ ಬಿಜೆಪಿ ಸಚಿವ!

ಸಚಿವ ವಾಸನ್ ಆಹಿರ್
ರಾಜಕೋಟ್: ಬಿಜೆಪಿಗೆ ಭಾರೀ ಮುಜುಗರ ಉಂಟು ಮಾಡುವ ಘಟನೆಯೊಂದರಲ್ಲಿ ಪಕ್ಷದ ಆಡಳಿತವಿರುವ ಗುಜರಾತ್ ರಾಜ್ಯದ ಪ್ರವಾಸೋದ್ಯಮ ಸಚಿವ ವಾಸನ್ ಆಹಿರ್ ಆಗಸ್ಟ್ 10ರಂದು ಕಚ್ಛ್ ನ ಮಾಂಡ್ವಿ ತಾಲೂಕಿನ ಬಿಡದ್ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಿಟ್ಟಿದ್ದಾರೆ.
ಈ ಸಮಾರಂಭದಲ್ಲಿ ಜೇಟ್ಲಿ ಅವರ ನಿಧನಕ್ಕೆ ವಾಸನ್ 'ದುಃಖ' ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ 'ಮೃತರ' ಗೌರವಾರ್ಥ ಎರಡು ನಿಮಿಷ ಮೌನವನ್ನೂ ಆಚರಿಸಿದ್ದರು.
ರೈತರಿಗೆ ತರಬೇತಿ ನೀಡುವ ಕುರಿತಾದ ಕಾರ್ಯಕ್ರಮದಲ್ಲಿ ವಾಸನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ಸಮಾರಂಭದಲ್ಲಿ ಬಿಜೆಪಿಯ ಕಚ್ಛ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಜಡೇಜಾ ಕೂಡ ಉಪಸ್ಥಿತರಿದ್ದುದು ಗಮನಾರ್ಹ.
ಆದರೆ ಈ ಶ್ರದ್ಧಾಂಜಲಿ ಪ್ರವರ ಇಷ್ಟಕ್ಕೇ ಮುಗಿದಿರಲಿಲ್ಲ. ಕಚ್ಛ್ ವಾರ್ತಾ ಇಲಾಖೆ ಈ ಸಮಾರಂಭದ ಕುರಿತಾದ ತನ್ನ ವರದಿಯ ಪತ್ರಿಕಾ ಹೇಳಿಕೆಯಲ್ಲೂ ಸಮಾರಂಭದಲ್ಲಿ ಉಪಸ್ಥಿತರಿದ್ದ ರೈತರು ಹಾಗೂ ಅತಿಥಿಗಳು ಜೇಟ್ಲಿಗೆ 'ಶ್ರದ್ಧಾಂಜಲಿ' ಸಲ್ಲಿಸಿದ್ದರೆಂಬುದನ್ನು ಉಲ್ಲೇಖಿಸಿತ್ತು.
ಈ ಕುರಿತಂತೆ ರಾಜಕೋಟ್ ನ ಜಂಟಿ ಮಾಹಿತಿ ನಿರ್ದೇಶಕ ಶರದ್ ಬುಮಡಿಯಾ ಅವರನ್ನು ಸಂಪರ್ಕಿಸಿದಾಗ ಎಲ್ಲಾ ಪತ್ರಿಕಾ ಹೇಳಿಕೆಗಳನ್ನು ತಾವು ಪರಿಶೀಲಿಸುವುದಿಲ್ಲ, ಅದು ಉಪನಿರ್ದೇಶಕರ ಜವಾಬ್ದಾರಿ ಎಂದಿದ್ದಾರೆ.