ನಾಗರಿಕರ ದೋಷರಹಿತ ಪಟ್ಟಿಯನ್ನು ಖಚಿತಪಡಿಸಲು ಸುಪ್ರೀಂ ಮೆಟ್ಟಿಲನ್ನೇರಿದ್ದೆವು:ಅಸ್ಸಾಂ ಮುಖ್ಯಮಂತ್ರಿ

ಗುವಾಹಟಿ, ಆ.15: ಕರಡು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯ ಮಾದರಿ ಮರು ದೃಢೀಕರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ತನ್ನ ಸರಕಾರದ ನಿರ್ಧಾರವನ್ನು ಗುರುವಾರ ಇಲ್ಲಿ ಸಮರ್ಥಿಸಿಕೊಂಡ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರು,ದೋಷರಹಿತ ಪಟ್ಟಿಯನ್ನು ಖಚಿತಪಡಿಸಲು ಆ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಸ್ವಾತಂತ್ರೋತ್ಸವ ದಿನದಂದು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಸೋನೊವಾಲ್,ಅಸ್ಸಾಮಿನಲ್ಲಿ ವಾಸವಾಗಿರುವ ಪ್ರತಿಯೊಬ್ಬ ನಿಜವಾದ ಭಾರತೀಯ ಪ್ರಜೆಯ ಸುರಕ್ಷತೆಯನ್ನು ಕಾಯ್ದುಕೊಳ್ಳಲು ರಾಜ್ಯ ಸರಕಾರವು ಬದ್ಧವಾಗಿದೆ. ಸರಿಯಾದ ಮತ್ತು ದೋಷರಹಿತ ಎನ್ಆರ್ಸಿಗಾಗಿ ಮರು ದೃಢೀಕರಣಕ್ಕಾಗಿ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿತ್ತು ಎಂದರು.
ಎನ್ಆರ್ಸಿಯಲ್ಲಿ ವ್ಯಕ್ತಿಗಳ ತಪ್ಪು ಸೇರ್ಪಡೆಗಳು ಮತ್ತು ಹೊರಗಿಡುವಿಕೆಯನ್ನು ಪತ್ತೆ ಹಚ್ಚಲು ಶೇ.20ರಷ್ಟು ಮಾದರಿ ಮರು ದೃಢೀಕರಣಕ್ಕೆ ಅನುಮತಿ ಕೋರಿ ಕೇಂದ್ರ ಮತ್ತು ಅಸ್ಸಾಂ ಸರಕಾರಗಳು ಸಲ್ಲಿಸಿದ್ದ ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯವು ಜು.23ರಂದು ತಿರಸ್ಕರಿಸಿತ್ತು. ಆ.31ರೊಳಗೆ ಎನ್ಆರ್ಸಿಯ ಅಂತಿಮ ಆವೃತ್ತಿಯು ಪ್ರಕಟಗೊಳ್ಳಬೇಕಿದೆ.
ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಡಿ ಎನ್ಆರ್ಸಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯಾವುದೇ ವಿದೇಶಿಯರ ಹೆಸರುಗಳಿಲ್ಲದ ಮತ್ತು ಯಾವುದೇ ಭಾರತೀಯ ಪ್ರಜೆಯ ಹೆಸರನ್ನು ಕೈಬಿಟ್ಟಿರದ ಐತಿಹಾಸಿಕ ದಾಖಲೆಯನ್ನು ಅಸ್ಸಾಂ ಜನತೆ ಪಡೆಯಲಿದ್ದಾರೆ ಎಂದು ಸೋನೊವಾಲ್ ಹೇಳಿದರು.
ಅಸ್ಸಾಂ ಸರಕಾರವು ಎನ್ಆರ್ಸಿ ಸಿದ್ಧತೆ ಕಾರ್ಯಕ್ಕೆ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ ಮತ್ತು ತನ್ನ ಸುಮಾರು 55,000 ನೌಕರರನ್ನು ಈ ಕಾರ್ಯದಲ್ಲಿ ತೊಡಗಿಸಿದೆ ಎಂದೂ ಅವರು ತಿಳಿಸಿದರು.