ಆರೋಪಿಗಳ ಖುಲಾಸೆ ಪಶ್ನಿಸಿ ಮೇಲ್ಮನವಿ ಸಲ್ಲಿಸಲಿರುವ ರಾಜಸ್ಥಾನ ಸರಕಾರ
ಪೆಹ್ಲೂ ಖಾನ್ ಹತ್ಯೆ ಪ್ರಕರಣ
ಹೊಸದಿಲ್ಲಿ, ಆ.16: ಜಾನುವಾರು ವ್ಯಾಪಾರಿ ಪೆಹ್ಲೂ ಖಾನ್ ಅವರನ್ನು ಥಳಿಸಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದ ಆರು ಮಂದಿಯನ್ನು ಜಿಲ್ಲಾ ನ್ಯಾಯಾಲಯ ಬಿಡುಗಡೆಗೊಳಿಸಿ ತೀರ್ಪು ನೀಡಿರುವುದನ್ನು ಮರುಪರಿಶೀಲಿಸುವುದಾಗಿ ರಾಜಸ್ಥಾನ ಸರಕಾರ ಶುಕ್ರವಾರ ತಿಳಿಸಿದೆ.
ಪೆಹ್ಲೂ ಖಾನ್ ಮೇಲೆ ಹಲ್ಲೆ ನಡೆಸುತ್ತಿರುವುದು ಮೊಬೈಲ್ ಫೋನ್ ವೀಡಿಯೊದಲ್ಲಿ ದಾಖಲಾಗಿದ್ದು ಅದರ ಆಧಾರದಲ್ಲಿ ಪೊಲೀಸರು ದಾಳಿಕೋರರನ್ನು ಬಂಧಿಸಿದ್ದರು. ಗಂಭೀರ ಗಾಯಗೊಂಡಿದ್ದ ಖಾನ್ ಮೂರು ದಿನಗಳ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ತನಿಖೆಯಲ್ಲಿ ಉಂಟಾಗಿರುವ ಲೋಪಗಳನ್ನು ತಿಳಿಯಲು ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸುವುದಾಗಿ ಸರಕಾರ ತಿಳಿಸಿದೆ.
ಆರೋಪಿಗಳನ್ನು ಸಂಶಯದ ಆಧಾರದಲ್ಲಿ ಬಿಡುಗಡೆಗೊಳಿಸಿದ ಅಲ್ವಾರ್ ಜಿಲ್ಲಾ ನ್ಯಾಯಾಲಯ, ಪೆಹ್ಲೂ ಖಾನ್ ಹೇಳಿಕೆಯಲ್ಲಿ ಆರೋಪಿಗಳ ಹೆಸರನ್ನು ಹೇಳಿರಲಿಲ್ಲ, ಆ ಹೆಸರುಗಳನ್ನು ಎರಡು ವರ್ಷಗಳ ನಂತರ ಸೇರಿಸಲಾಯಿತು ಮತ್ತು ಆರೋಪಿಗಳ ಗುರುತಿಗಾಗಿ ಪೆರೇಡ್ ನಡೆಸಿರಲಿಲ್ಲ ಎನ್ನುವುದರತ್ತ ಬೆಟ್ಟು ಮಾಡಿತ್ತು. ಹಲ್ಲೆಯನ್ನು ವೀಡಿಯೊ ಮಾಡಿದ್ದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ. ಹಾಗಾಗಿ ಅದನ್ನು ಸಾಕ್ಷಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.