ಆತ್ಮಹತ್ಯೆಗೆ ಶರಣಾದ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಚಂದ್ರಶೇಖರ್
ಚೆನ್ನೈ, ಆ.16: ಭಾರತದ ಮಾಜಿ ಆರಂಭಿಕ ಆಟಗಾರ ವಿ.ಬಿ.ಚಂದ್ರಶೇಖರ್ ಗುರುವಾರ ಸಂಜೆ ಮೈಲಾಪುರ್ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ಮಹಡಿಯ ಬೆಡ್ರೂಮ್ನ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 57ರ ವಯಸ್ಸಿನ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.
‘‘ಪತಿಯಿದ್ದ ಕೊಠಡಿಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಗ ನಾನು ಕಿಟಿಕಿ ಮೂಲಕ ನೋಡಿದಾಗ ಅವರು ಫ್ಯಾನ್ಗೆ ನೇಣು ಹಾಕಿಕೊಂಡಿದ್ದು ಕಂಡುಬಂತು ಎಂದು ಚಂದ್ರಶೇಖರ್ ಪತ್ನಿ ತಮಗೆ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಇರಲಿಲ್ಲ’’ ಎಂದು ತನಿಖಾಧಿಕಾರಿ ಇನ್ಸ್ಪೆಕ್ಟರ್ ಸೆಂಥಿಲ್ ಮುರುಗನ್ ಹೇಳಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ಕುಳಿತು ಟೀ ಕುಡಿದಿದ್ದ ಚಂದ್ರಶೇಖರ್ ಗುರುವಾರ ಸಂಜೆ 5:45ಕ್ಕೆ ತಮ್ಮ ಕೊಠಡಿಗೆ ತೆರಳಿದ್ದರು. ಕ್ರಿಕೆಟ್ ಸಂಬಂಧಿತ ವ್ಯವಹಾರದಲ್ಲಿ ಅವರು ಭಾರೀ ನಷ್ಟ ಅನುಭವಿಸಿ ಖಿನ್ನತೆಗೆ ಒಳಗಾಗಿದ್ದರು ಎಂದು ಚಂದ್ರಶೇಖರ್ ಪತ್ನಿ ಸೌಮ್ಯಾ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್ ತಮಿಳುನಾಡು ಪ್ರೀಮಿಯರ್ ಲೀಗ್ ತಂಡ-ವಿಬಿ ಕಾಂಚಿ ವೀರನ್ಸ್ ತಂಡದ ಮಾಲಕರಾಗಿದ್ದರು. ವೆಲಾಚೆರಿಯಲ್ಲಿ ಕ್ರಿಕೆಟ್ ಅಕಾಡಮಿಯನ್ನು ನಡೆಸುತ್ತಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕ 1988-90ರ ಅವಧಿಯಲ್ಲಿ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದ ಚಂದ್ರಶೇಖರ್ ಭಾರತದ ಪರ 7 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 1987ರಲ್ಲಿ ರಣಜಿ ಟ್ರೋಫಿ ಜಯಿಸಿದ್ದ ತಮಿಳುನಾಡು ತಂಡದ ಸದಸ್ಯರಾಗಿದ್ದರು.
1988ರಲ್ಲಿ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇರಾನಿ ಟ್ರೋಫಿ ಪಂದ್ಯದಲ್ಲಿ ಶೇಷ ಭಾರತ ವಿರುದ್ಧ 56 ಎಸೆತಗಳಲ್ಲಿ 100 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಸಾಧನೆಯ ಮೂಲಕ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ್ದರು. ಚಂದ್ರಶೇಖರ್ ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಗಳಿಸಿದ್ದ ವೇಗದ ಶತಕವನ್ನು 2016ರಲ್ಲಿ ರಿಷಭ್ ಪಂತ್ ಮುರಿದಿದ್ದರು. ಪಂತ್ 48 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಗೋವಾದ ಪರವಾಗಿಯೂ ರಣಜಿ ಆಡಿದ್ದ ಚಂದ್ರಶೇಖರ್, ರಾಷ್ಟ್ರೀಯ ಆಯ್ಕೆಗಾರ, ರಾಜ್ಯ ಕೋಚ್ ಹಾಗೂ ವೀಕ್ಷಕವಿವರಣೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ತಮಿಳುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡದೊಂದಿಗೆ ಹೆಚ್ಚು ಸಕ್ರಿಯರಾಗಿದ್ದರು.