ಶೀಘ್ರವೇ ‘ಮುಳುಗುತ್ತಿರುವ’ ಜಕಾರ್ತದಿಂದ ಇಂಡೋನೇಶ್ಯ ರಾಜಧಾನಿ ಸ್ಥಳಾಂತರ
ಜಕಾರ್ತ, ಆ. 17: ಇಂಡೋನೇಶ್ಯ ರಾಜಧಾನಿ ಜಕಾರ್ತ ಸಮಯದ ವಿರುದ್ಧ ಓಡುತ್ತಿದೆ.
ಜಗತ್ತಿನ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರಗಳಲ್ಲಿ ಒಂದಾಗಿರುವ ಜಕಾರ್ತವು, ಇಂದಿನ ದರದಲ್ಲೇ ಮುಂದುವರಿದರೆ, 2050ರ ವೇಳೆಗೆ ಮೂರನೇ ಒಂದರಷ್ಟು ನೀರಿನಿಂದ ಆವೃತಗೊಳ್ಳುತ್ತದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ದಶಕಗಳ ಅವಧಿಯಲ್ಲಿ ನಡೆದುಕೊಂಡು ಬಂದ ಅಂತರ್ಜಲ ನಿಕ್ಷೇಪದ ಅನಿಯಂತ್ರಿತ ಹಾಗೂ ಅಧಿಕ ಬಳಕೆ, ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ದಿನೇ ದಿನೇ ಅನಿಶ್ಚಿತವಾಗುತ್ತಿರುವ ಹವಾಮಾನವೇ ಇದಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಜಕಾರ್ತದ ಸಾಕಷ್ಟು ಭಾಗ ಈಗಾಗಲೇ ನಾಪತ್ತೆಯಾಗಿದೆ.
ಈಗ ಜಾರಿಯಲ್ಲಿರುವ ಪರಿಸರ ಸಂರಕ್ಷಣೆ ಕ್ರಮಗಳು ಈ ಪರಿಸ್ಥಿತಿಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರವು. ಹಾಗಾಗಿ, ರಾಜಧಾನಿಯನ್ನೇ ಬದಲಾಯಿಸುವ ಕಠಿಣ ನಿರ್ಧಾರಕ್ಕೆ ಅಧಿಕಾರಿಗಳು ಬಂದಿದ್ದಾರೆ.
‘‘ನಮ್ಮ ದೇಶದ ರಾಜಧಾನಿ ಬೋರ್ನಿಯೊ ದ್ವೀಪಕ್ಕೆ ಸ್ಥಳಾಂತರವಾಗಲಿದೆ’’ ಎಂದು ಇಂಡೋನೇಶ್ಯದ ನಾಯಕ ಜೊಕೊ ವಿಡೋಡೊ ಟ್ವಿಟರ್ನಲ್ಲಿ ಹೇಳಿದ್ದಾರೆ.
ದೇಶದ ಆಡಳಿತ ಮತ್ತು ರಾಜಕೀಯ ಹೃದಯದ ಪಲ್ಲಟವು ರಾಷ್ಟ್ರೀಯ ಸಂರಕ್ಷಣೆಯ ಕಾರ್ಯವೇ ಆಗಿರಬಹುದು. ಆದರೆ, ಅದು ಜಕಾರ್ತದ ಮರಣ ಗಂಟೆಯನ್ನು ಬಾರಿಸುತ್ತದೆ. ನಗರದಲ್ಲಿ ವಾಸಿಸುತ್ತಿರುವ ಒಂದು ಕೋಟಿ ಜನರ ಪೈಕಿ ಹೆಚ್ಚಿನವರಿಗೆ ಅಲ್ಲಿಂದ ಹೊರ ಹೋಗುವ ಅವಕಾಶ ತೀರಾ ಸೀಮಿತವಾಗಿದೆ.