ಮೀಸಲಾತಿ ವಿರೋಧಿ ಮಾನಸಿಕತೆ ತ್ಯಜಿಸಿ: ಸಂಘಪರಿವಾರಕ್ಕೆ ಮಾಯಾವತಿ ಕಿವಿಮಾತು
ಹೊಸದಿಲ್ಲಿ, ಆ.19: ಮೀಸಲಾತಿ ಬೆಂಬಲಿಗರು ಮತ್ತು ವಿರೋಧಿಗಳ ಮಧ್ಯೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಯಬೇಕು ಎನ್ನುವ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ಈ ವಿಷಯದಲ್ಲಿ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದ್ದು ಸಂಘಪರಿವಾರ ತನ್ನ ಮೀಸಲಾತಿ ವಿರೋಧಿ ಮಾನಸಿಕತೆಯನ್ನು ತ್ಯಜಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ರವಿವಾರ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಕ್ರಮ ಜ್ಞಾನೋತ್ಸವದಲ್ಲಿ ಮಾತನಾಡುವ ವೇಳೆ ಮೀಸಲಾತಿ ವಿಷಯವನ್ನು ಪ್ರಸ್ತಾಪಿಸಿದ್ದ ಭಾಗವತ್, ಈ ವಿಷಯದಲ್ಲಿ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಯುವ ಅಗತ್ಯವಿದೆ ಎಂದು ತಿಳಿಸಿದ್ದರು. ಭಾಗವತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ)ದ ಮುಖ್ಯಸ್ಥ ರಾಮದಾಸ್ ಅಠಾವಳೆ, ಮೀಸಲಾತಿ ಕುರಿತು ಚರ್ಚೆ ನಡೆಸಬೇಕೆಂಬ ಅಗತ್ಯವಿದೆ ಎಂದು ನನಗನಿಸುವುದಿಲ್ಲ. ಹಾಗೊಂದು ವೇಳೆ ಚರ್ಚೆ ನಡೆದರೂ ಜನರು ಎಸ್ಸಿ/ಎಸ್ಟಿಗೆ ಮೀಸಲಾತಿಯ ಅಗತ್ಯವಿದೆ ಎಂದೇ ಹೇಳುತ್ತಾರೆ ಎಂದು ತಿಳಿಸಿದ್ದಾರೆ.