ತನ್ನ ಮಕ್ಕಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಬಿಎಸ್ವೈ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ: ಕುಮಾರಸ್ವಾಮಿ
"ಕೃಷ್ಣಾ ಕಚೇರಿ ವರ್ಗಾವಣೆ ದಂಧೆ ನಡೆಸುವ ಮಾರ್ಕೆಟ್ ಆಗಿದೆ"
![ತನ್ನ ಮಕ್ಕಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಬಿಎಸ್ವೈ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ: ಕುಮಾರಸ್ವಾಮಿ ತನ್ನ ಮಕ್ಕಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಬಿಎಸ್ವೈ ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ: ಕುಮಾರಸ್ವಾಮಿ](https://www.varthabharati.in/sites/default/files/images/articles/2019/08/19/205977-1566233215.jpg)
ಚಿಕ್ಕಮಗಳೂರು, ಆ.19: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರೀತಿಯಲ್ಲಿ ನಾನು ಸಂವಿಧಾನಾತ್ಮಕ ಸಂಸ್ಥೆಗಳನ್ನು ಖರೀದಿ ಮಾಡಲೂ ಎಂದೂ ಮುಂದಾಗಿಲ್ಲ. 14 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವ ವೇಳೆ ಜನರ ಕಷ್ಟಕ್ಕೆ ಸ್ಪಂದಿಸಲು ಯಾವ ಯೋಜನೆಗಳನ್ನು ಜಾರಿ ಮಾಡಬೇಕೆಂದು ಗಮನ ನೀಡಿದ್ದೇನೆಯೇ ಹೊರತು ಅಧಿಕಾರ ದುರುಪಯೋಗಕ್ಕೆ ಮುಂದಾಗಿಲ್ಲ. ನನ್ನ ವೈಯಕ್ತಿಯ ವಿಷಯಗಳ ರಕ್ಷಣೆಗೂ ಮುಂದಾಗಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಜಿಲ್ಲೆಯ ಮಲೆನಾಡು ತಾಲೂಕುಗಳ ವ್ಯಾಪ್ತಿಯಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಹಾನಿ ವೀಕ್ಷಣೆಗೆಂದು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಘನಂಧಾರಿ ಕೆಲಸ ಮಾಡುತ್ತಿದ್ದಾರೆಂದು ಪೋನ್ ಟ್ಯಾಪ್ ಮಾಡಿಸಬೇಕಾ? ಫೋನ್ ಟ್ಯಾಪಿಂಗ್ನಲ್ಲಿ ನನ್ನ ಹೆಸರು ಇದೆಯೇ? ಎಂದು ಪ್ರಶ್ನಿಸಿದ ಅವರು, ವಿಶ್ವನಾಥ್ ಮನುಷ್ಯನಾ, ವಯಸ್ಸಿಗಾದರೂ ಒಂದು ಗಾಂಭೀರ್ಯತೆ ಬೇಡವೇ? ವಿಶ್ವನಾಥ್ ಅವರಿಗೆ ವಯಸ್ಸಾಗಿದೆ. ಅವರ ಕೊನೆಗಾಲದಲ್ಲಿ, ರಾಜಕೀಯದ ಸಂಧ್ಯಾಕಾಲದಲ್ಲಾದರೂ ಗೌರವಯುತವಾಗಿ ನಡೆದುಕೊಳ್ಳಲಿ, ಅವರಿಂದ ನಾನೇನು ಕಲಿಯಲು ಇಲ್ಲ ಎಂದು ಹೇಳಿದರು.
ದೂರವಾಣಿ ಕದ್ದಾಲಿಕೆ ವಿಚಾರವಾಗಿ ನಾನು ಯಾವ ತನಿಖೆಯನ್ನಾದರೂ ಮಾಡಿಕೊಳ್ಳಿ ಎಂದು ಮುಕ್ತವಾಗಿ ಮಾತನಾಡಿದ್ದೇನೆ. ಈ ವಿಚಾರದಲ್ಲಿ ನಾನು ಶುದ್ಧವಾಗಿದ್ದೇನೆ. ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಸುಳ್ಳು ಹೇಳುತ್ತಿದ್ದರೆ ಮುದುರಿಕೊಂಡು ಕೂರಬೇಕಾಗಿತ್ತು. ಯಡಿಯೂರಪ್ಪನ ಬಳಿ ಹೋಗಿ ನನ್ನ ಉಳಿಸಪ್ಪಾ ಎಂದು ಕೇಳಿಕೊಳ್ಳಬೇಕಿತ್ತು. ನಾನು ಸ್ವಾಭಿಮಾನ ಕಳೆದುಕೊಂಡು ಬದುಕುವವನಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜಕೀಯವಾಗಿ ನಿವೃತ್ತಿ ಹೊಂದುತ್ತೇನೆಯೇ ಹೊರತು, ಸ್ವಾಭಿಮಾನ ಬಿಟ್ಟು ಬದುಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಮಕ್ಕಳನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಬೇಕು. ಕೃಷ್ಣಾ ಕಚೇರಿ ವರ್ಗಾವಣೆ ಧಂದೆ ನಡೆಸುವ ಮಾರ್ಕೆಟ್ ಆಗಿದೆ. ಇದನ್ನು ಯಡಿಯೂರಪ್ಪ ತಮ್ಮ ಮಕ್ಕಳ ಮೂಲಕ ಮಾಡಿಸುತ್ತಿದ್ದಾರೆ. ಇಂತಹ ಕೆಲಸವನ್ನು ನಾನು ನನ್ನ ಮಗನ ಕೈಯಲ್ಲೂ ಮಾಡಿಸಿಲ್ಲ. ಸಿಎಂ ಆಗಿದ್ದಾಗ ನನ್ನ ಮಗ ನನ್ನ ಹತ್ತಿರಕ್ಕೂ ಸುಳಿದಿರಲಿಲ್ಲ. ಯಡಿಯೂರಪ್ಪ ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳದಿದ್ದರೆ ಒಮ್ಮೆ ಹೋಗಿದ್ದ ಜೈಲಿಗೆ ಮತ್ತೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮ್ಮಿಶ್ರ ಸರಕಾರವನ್ನು ಉರುಳಿಸಲು ಯಡಿಯೂರಪ್ಪನ ಮಕ್ಕಳು ಸಮಾಜಘಾತುಕ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಲೀಡ್ ಪಡೆದಿದ್ದಾರೆ. ಅತೃಪ್ತ ಶಾಸಕರಿಗೆ ಸ್ಪೆಷಲ್ ವಿಮಾನ ಮಾಡಿಸಿ ಕೊಟ್ಟಿದ್ದಾರೆ. ರಘುಮೂರ್ತಿ ಎಂಬಾತ ಜೈಲಿಗೆ ಹೋಗಿ ಬಂದವನು. ಅಂಥವನನ್ನು ಯಲಹಂಕದ ತಹಶೀಲ್ದಾರ್ ಮಾಡಿದ್ದಾರೆ. ಜೈಲಿಗೆ ಹೋಗಿ ಬಂದಿದ್ದಕ್ಕೆ ಈ ಗೌರವವೇ ಅಥವಾ ಅಣ್ಣತಮ್ಮಂದಿರೆಂದು ಕೊಟ್ಟಿದ್ದೀರಾ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ನಮ್ಮ ಕುಟಂಬದ ಮರ್ಯಾದೆಗಾಗಿ ಬದುಕುತ್ತಿದ್ದೇವೆ. ಯಡಿಯೂರಪ್ಪನಂತೆ ನಾನು ಬದುಕುತ್ತಿಲ್ಲ. ಬದುಕುವುದನ್ನು ಇವರಿಂದ ಕಲಿಯಬೇಕಾಗಿಲ್ಲ. ಯಡಿಯೂರಪ್ಪ ಹಾಗೂ ಅವರ ಮಕ್ಕಳಿಗೆ ಆತ್ಮಸಾಕ್ಷಿ ಇದ್ದರೆ ತಮ್ಮ ಹೃದಯಕ್ಕೆ ಪ್ರಶ್ನೆ ಹಾಕಿಕೊಂಡಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆಂದು ತಿಳಿಯುತ್ತದೆ ಎಂದ ಅವರು, ಟ್ವೀಟ್ ಮಾಡುವುದು ಮುಖ್ಯವಲ್ಲ, ನಾನು ಸಾವಿರ ಟ್ವೀಟ್ ಮಾಡಬಲ್ಲೆ. ಬಿಡಿಒಗೆ ಕಮೀಶನರ್ ನನ್ನಾಗಿ ವರ್ಗಾವಣೆ ಮಾಡಿದ್ದೀರಲ್ಲ, ಎಷ್ಟು ಕೋಟಿ ಪಡೆದಿದ್ದೀರಿ? ಜೈಲಿನಲ್ಲಿದ್ದ ತಹಶೀಲ್ದಾರ್ ರಘುಮೂರ್ತಿಯನ್ನು ಯಲಹಂಕಕ್ಕೆ ಹಾಕಿಕೊಂಡು ಯಡಿಯೂಪ್ಪ ಎಷ್ಟು ಪಡೆದಿದ್ದಾರೆ? ಅವರ ಮಗ ಎಷ್ಟು ಪಡೆದಿದ್ದಾರೆ? ಅಲ್ಲಿನ ಶಾಸಕರಿಗೆ ಎಷ್ಟು ನೀಡಿದ್ದಾರೆ, ವರ್ಗಾವಣೆ ದಂಧೆಯ ಮಧ್ಯವರ್ತಿ ಅರವಿಂದ್ ಎಂಬಾತ ಎಷ್ಟು ಪಡೆದಿದ್ದಾರೆಂದು ಹೇಳಬೇಕಾ ಎಂದು ಹೇಳಿದ ಅವರು, ಇಂತಹ ಅಧಿಕಾರಿಗಳು ಎಂತವರೆಂದು ಗೊತ್ತಿದ್ದರಿಂದ ಅಂತವರನ್ನು ನಾನೂ ಮೂಲೆಗುಂಪು ಮಾಡಿದ್ದೆ. ಯಡಿಯೂರಪ್ಪ ಅಂತವರನ್ನೇ ತನ್ನ ಹತ್ತಿರದಲ್ಲಿ ಕೂರಿಸಿಕೊಂಡಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದರು.