ಮನ್ಮುಲ್ ಬಹುಕೋಟಿ ಹಗರಣ ತನಿಖೆಗೆ ಒತ್ತಾಯ: ಹೆದ್ದಾರಿಗೆ ಹಾಲು ಸುರಿದು ಪ್ರತಿಭಟನೆ
![ಮನ್ಮುಲ್ ಬಹುಕೋಟಿ ಹಗರಣ ತನಿಖೆಗೆ ಒತ್ತಾಯ: ಹೆದ್ದಾರಿಗೆ ಹಾಲು ಸುರಿದು ಪ್ರತಿಭಟನೆ ಮನ್ಮುಲ್ ಬಹುಕೋಟಿ ಹಗರಣ ತನಿಖೆಗೆ ಒತ್ತಾಯ: ಹೆದ್ದಾರಿಗೆ ಹಾಲು ಸುರಿದು ಪ್ರತಿಭಟನೆ](https://www.varthabharati.in/sites/default/files/images/articles/2019/08/20/206130-1566317768.jpg)
ಮಂಡ್ಯ, ಆ.20: ಮಂಡ್ಯ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಮನ್ಮುಲ್)ದಲ್ಲಿ ನಡೆದಿರುವ ಬಹುಕೋಟಿ ಹಗರಣದ ತನಿಖೆ ಒತ್ತಾಯಿಸಿ ಗೆಲ್ಲಲಗೆರೆ ಬಳಿ ಇರುವ ಒಕ್ಕೂಟದ ಎದುರು ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ವತಿಯಿಂದ ಹೆದ್ದಾರಿಗೆ ಹಾಲು ಸುರಿದು ಪ್ರತಿಭಟಿಸಲಾಯಿತು.
ಜಾನುವಾರು ಸಮೇತ ಆಗಮಿಸಿದ ನೂರಾರು ಮಂದಿ ಮನ್ಮುಲ್ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ತಡೆದರು. ನಂತರ, ಬೆಂಗಳೂರು ಮೈಸೂರು ಹೆದ್ದಾರಿಗೆ ಬಂದು ನೂರಾರು ಲೀಟರ್ ಹಾಲು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಲಾಗಿತ್ತು. ಆದರೆ, ಸರಕಾರ ಆದೇಶಕ್ಕೆ ತಡೆ ನೀಡಿ ಚುನಾವಣೆ ಘೋಷಿಸಿದೆ. ಮತ್ತೆ ಭ್ರಷ್ಟರು ಅಧಿಕಾರಕ್ಕೆ ಬರಲು ಅವಕಾಶ ಕಲ್ಪಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್ ಮಾತನಾಡಿ, ಮೇಗಾ ಡೇರಿ ಯೋಜನೆ ಸೇರಿದಂತೆ ಹಲವು ಕಾಮಗಾರಿ, ಇತರೆ ವ್ಯವಹಾರಗಳಲ್ಲಿ ಕೋಟ್ಯಂತ ರೂ. ಲೂಟಿ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರೈತ ನಾಯಕಿ ಸುನಂದ ಜಯರಾಮು ಮಾತನಾಡಿ, ಒಕ್ಕೂಟ ಹಾಲಿಗೆ ವೈಜ್ಞಾನಿಕ ದರ ನೀಡುತ್ತಿಲ್ಲ. ಕಳೆದ 5 ವರ್ಷದಲ್ಲಿ 500 ಕೋಟಿ ಅವ್ಯವಹಾರ ನಡೆದಿದೆ. ಜಿಲ್ಲೆಯ, ಸಂಸದರು ಧ್ವನಿ ಎತ್ತಿಲ್ಲ ಎಂದು ಕಿಡಿಕಾರಿದರು.
ಸ್ಥಳಕ್ಕೆ ಭೇಟಿ ನೀಡಿದ ಮದ್ದೂರು ತಹಸೀಲ್ದಾರ್ ಗೀತಾ, ಈ ಸಂಬಂಧ ಸರಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕಾರಸವಾಡಿ ಮಹದೇವು, ಎಚ್.ಕೆ.ಕೃಷ್ಣ, ಪೂವಯ್ಯ, ಶಿವಲಿಂಗಯ್ಯ, ಲಕ್ಷ್ಮಿನಾರಾಯಣ್, ಶಿವರಾಜು, ವರಲಕ್ಷ್ಮಿ, ಸುಧಾ, ಹೊನ್ನಪ್ಪ ಪ್ರತಿಭಟನೆ ನೇತೃತ್ವ ವಹಿಸಿದ್ದರು.