ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ ತಂಡ ಭೇಟಿ: ನೂತನ ಸಚಿವ ಜೆ.ಸಿ.ಮಾಧುಸ್ವಾಮಿ
![ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ ತಂಡ ಭೇಟಿ: ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ ತಂಡ ಭೇಟಿ: ನೂತನ ಸಚಿವ ಜೆ.ಸಿ.ಮಾಧುಸ್ವಾಮಿ](/images/placeholder.jpg)
ಬೆಂಗಳೂರು, ಆ.20: ನೆರೆ ಪೀಡಿತ ಪ್ರದೇಶಗಳಿಗೆ ಸಚಿವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರ ಕಾರ್ಯಕ್ರಮಗಳ ಕುರಿತು ಆನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ನೂತನ ಸಚಿವರೊಂದಿಗಿನ ಔಪಚಾರಿಕ ಸಚಿವ ಸಂಪುಟ ಸಭೆಯ ಬಳಿಕ ಸಚಿವ ಸುರೇಶ್ ಕುಮಾರ್ ಜೊತೆ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ನೆರೆ ಪೀಡಿತ ಸಂತ್ರಸ್ತರ ಅಹವಾಲುಗಳನ್ನು ಸಚಿವರು ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಂತೆ ನೆರೆ ಪೀಡಿತ ಪ್ರದೇಶಗಳಿಗೆ ಸಚಿವರು ಭೇಟಿ ನೀಡಲಿದ್ದಾರೆ. ಐದು ಲಕ್ಷ ರೂ.ಗಳನ್ನು ಕೊಟ್ಟರೂ ಈ ಕೂಡಲೇ ಮನೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದುದರಿಂದ, ಪರಿಸ್ಥಿತಿ ಅವಲೋಕನ ಮಾಡಿದ ಬಳಿಕ ಪರಿಹಾರ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ಮೇಲೆ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರಮೋದಿ ಆದಷ್ಟು ಬೇಗ ಪರಿಹಾರ ಕೊಡುತ್ತಾರೆ. ಸದ್ಯಕ್ಕೆ ನಾವು ಬೇರೆ ಯಾವುದೇ ಕೆಲಸಗಳಿಗೆ ಕೈ ಹಾಕುವುದಿಲ್ಲ. ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಸರಕಾರಕ್ಕೆ ವರದಿ ಕೊಡುತ್ತೇವೆ ಎಂದು ಅವರು ಹೇಳಿದರು.
ಸಿಎಂ ನಿರ್ದೇಶನ: ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರ ನೋವಿಗೆ ಸ್ಪಂದಿಸುವುದು ನಮ್ಮ ಸರಕಾರದ ಪ್ರಥಮ ಆದ್ಯತೆಯಾಗಿದೆ. ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸುವುದಲ್ಲದೆ, ಪ್ರವಾಹದಿಂದ ತೀವ್ರ ತೊಂದರೆಯಾಗಿರುವ ಗ್ರಾಮಗಳಿಗೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ವಿಚಾರ ವಿನಿಮಯ ಮಾಡಿ, ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಚಿವ ಸಂಪುಟ ಸಭೆಯಲ್ಲಿ ಸೂಚನೆ ನೀಡಿದ್ದಾರೆ.
ಶೀಘ್ರದಲ್ಲಿಯೇ ಖಾತೆ ಹಂಚಿಕೆ ಮತ್ತು ಜಿಲ್ಲಾ ಉಸ್ತುವಾರಿಯ ಹೊಣೆಗಾರಿಕೆಯನ್ನು ನಿರ್ಧರಿಸಲಾಗುವುದು. ಅಷ್ಟರಲ್ಲಿ ಭೀಕರ ಪ್ರವಾಹ ಪರಿಸ್ಥಿತಿಗೆ ಒಳಗಾಗಿರುವ ಸಮಸ್ಯೆಗಳ ಅಧ್ಯಯನ ಕೈಗೊಂಡು ಪರಿಹಾರೋಪಾಯಗಳ ವರದಿ ಸಿದ್ಧಪಡಿಸಿ, ಮುಂದಿನ ಸಚಿವ ಸಂಪುಟ ಸಭೆಯೊಳಗೆ ಅನುಷ್ಠಾನಯೋಗ್ಯ ಕಾರ್ಯತಂತ್ರ ರೂಪಿಸುವಂತೆ ಎಲ್ಲ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದರು.
ರಾಜ್ಯವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡ ಸ್ಫೂರ್ತಿಯೊಂದಿಗೆ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಎಲ್ಲ ನೂತನ ಸಚಿವರಿಗೆ ಸಲಹೆ ಮಾಡಿದರು.
ಪ್ರವಾಹಪೀಡಿತ ಜಿಲ್ಲೆಗಳ ಉಸ್ತುವಾರಿ: ಬೆಳಗಾವಿ-ಲಕ್ಷಣ ಸವದಿ, ಚಿಕ್ಕೋಡಿ (ಬೆಳಗಾವಿ)-ಶಶಿಕಲಾ ಜೊಲ್ಲೆ, ಬಾಗಲಕೋಟೆ-ಕೆ.ಎಸ್.ಈಶ್ವರಪ್ಪ, ವಿಜಯಪುರ- ಗೋವಿಂದ ಕಾರಜೋಳ, ಹಾವೇರಿ-ಬಸವರಾಜ ಬೊಮ್ಮಾಯಿ, ಧಾರವಾಡ- ಜಗದೀಶ್ ಶೆಟ್ಟರ್, ಗದಗ-ಸಿ.ಸಿ.ಪಾಟೀಲ್, ಬಳ್ಳಾರಿ-ಶ್ರೀರಾಮುಲು, ಯಾದಗಿರಿ -ಶ್ರೀರಾಮುಲು ಮತ್ತು ಪ್ರಭುಚೌಹಾಣ್.
ಚಿಕ್ಕಮಗಳೂರು-ಸಿ.ಟಿ.ರವಿ, ಹಾಸನ-ಜೆ.ಸಿ.ಮಾಧುಸ್ವಾಮಿ, ಕೊಡಗು- ಎಸ್.ಸುರೇಶ್ ಕುಮಾರ್, ಮೈಸೂರು-ಆರ್.ಅಶೋಕ್, ಚಾಮರಾಜನಗರ- ವಿ.ಸೋಮಣ್ಣ, ದಕ್ಷಿಣ ಕನ್ನಡ ಹಾಗೂ ಉಡುಪಿ-ಕೋಟ ಶ್ರೀನಿವಾಸ್ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.